ಪರಿಸರಕ್ಕೆ ದಕ್ಕೆಯಾಗದಂತೇ ಬೆಟ್ಟಗುಡ್ಡ ಅರಣ್ಯದ ನಡುವೆ ಚಾರಣ ಮಾಡುವುದು ಚಾರಣಿಗರ ಜವಾಬ್ದಾರಿಯಾಗಿದೆ ಎಂದು ಚಿತ್ರಕಲಾವಿದರಾದ ಬಾಪುದಿನೇಶ್ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ನಡೆದ ಕೊಟ್ಟಿಗೆಹಾರದಿಂದ ದೇವರಮನೆವರೆಗೆ ಮಳೆನಡಿಗೆ ಪರಿಸರ ಅಧ್ಯಯನ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಟ್ಟಸಾಲುಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಚಾರಣ ಮಾಡುವಾಗ ಅಲ್ಲಿನ ಪ್ರಾಣಿ ಹಾಗೂ ಸಸ್ಯ ಸಂಕುಲದ ಬದುಕಿಗೆ ಅಡಚಣೆಯಾಗದಂತೇ ಎಚ್ಚರಿಕೆ ವಹಿಸಬೇಕಿದೆ. ಪರಿಸರದ ನಡುವೆ ಮನುಷ್ಯ ಕೆಲ ಕಾಲ ಕಳೆದಾಗ ಬದುಕಿನ ಜಂಜಾಟಗಳ ಒತ್ತಡ ಕಡಿಮೆಯಾಗಿ ಜೀವನೋತ್ಸಾಹ ಹೆಚ್ಚಾಗುತ್ತದೆ. ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಪರಿಸರದ ಬಗ್ಗೆ ಅರಿವು ಜಾಗೃತಿ ಕುತೂಹಲವನ್ನು ಮೂಡಿಸಲು ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಬೆಂಗಳೂರು, ಬಳ್ಳಾರಿ, ಹುಬ್ಬಳಿ, ಮಂಗಳೂರು, ತುಮಕೂರು ಸೇರಿದಂತೇ ರಾಜ್ಯದ ವಿವಿದೆಡೆಯಿಂದ ಆಗಮಿಸಿದ 50 ಕ್ಕೂ ಹೆಚ್ಚು ಚಾರಣಿಗರು ಮಳೆ ನಡಿಗೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕರಾದ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಲೇಖಕ ಪೂರ್ಣೇಶ್ ಮತ್ತಾವರ, ಶಾಮಿಲಿ, ಉರಗ ಪ್ರೇಮಿ ಸ್ನೇಕ್ ಆರೀಪ್, ಅರಣ್ಯ ಇಲಾಖೆ ಹಾಗೂ ಆನೆಕಾರ್ಯ ಪಡೆಯ ಅಧಿಕಾರಿಗಳಾದ ಸುಹಾಸ್, ಅಭಿಜಿತ್, ಮತ್ತು ಸಿಬ್ಬಂದಿಗಳು ಇದ್ದರು.



