ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕಡೂರು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಪಾವನ ಮತ್ತು ಆಕೆಯ ಪ್ರಿಯಕರ ಸಂಜು ಬಂಧಿತ ಆರೋಪಿಗಳು. ಪಾವನಳ ಪತಿ ನವೀನ್ ಕುಮಾರ್ (30ವರ್ಷ) ಕೊಲೆಯಾದಾತ.
ಆಗಸ್ಟ್ 6ರಂದು ಯಗಟಿ ಸಮೀಪದ ದೊಡ್ಡಗುಂಡಿ ಕೆರೆಯಲ್ಲಿ ನವೀನ್ ಕುಮಾರ್ ಮೃತದೇಹ ಪತ್ತೆಯಾಗಿತ್ತು. ಆತನ ಬೈಕ್ ಚಪ್ಪಲಿ, ಬ್ಯಾಟರಿ ಕೆರೆಯ ದಂಡೆಯಲ್ಲಿ ಪತ್ತೆಯಾಗಿದ್ದವು. ತನ್ನ ಗಂಡ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಪತ್ನಿ ನಾಟಕವಾಡಿದ್ದಳು. ಆದರೆ ನವೀನ್ ಕುಟುಂಬದ ಸದಸ್ಯರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆಯಲ್ಲಿ ನವೀನ್ ನನ್ನು ಆತನ ಪತಿ ಮತ್ತು ಪ್ರಿಯಕರ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಸಿನಿಮೀಯ ಶೈಲಿಯಲ್ಲಿ ಕೊಲೆ : ನವೀನ್ ಮತ್ತು ಪಾವನ 6 ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು ದಂಪತಿಗಳಿಗೆ 4 ವರ್ಷದ ಮಗುವಿದೆ. ಪಾವನ ವಿವಾಹಕ್ಕೆ ಮೊದಲು ಸಂಜು ಎಂಬಾತನನ್ನು ಪ್ರೀತಿಸುತ್ತಿದ್ದಳು ಮತ್ತು ವಿವಾಹದ ನಂತರವು ಆತನೊಂದಿಗೆ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ನವೀನ್ ಕುಮಾರ್ ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ.
ಅದರಂತೆ ತನ್ನ ಗಂಡನಿಗೆ ನಿದ್ರೆಮಾತ್ರೆ ಬೆರೆಸಿದ್ದ ಹಿಟ್ಟಿನಲ್ಲಿ ಚಪಾತಿ ಮಾಡಿಕೊಟ್ಟಿದ್ದಾಳೆ. ಚಪಾತಿ ತಿಂದು ಗಾಢ ನಿದ್ರೆಗೆ ಜಾರಿಗೆ ನಂತರ ನವೀನ್ ಕುಮಾರ್ ನನ್ನು ಪ್ರಿಯಕರನ ಜೊತೆ ಸೇರಿ ಬೈಕಿನಲ್ಲಿ ಎತ್ತಿಕೊಂಡು ಬಂದು ಸಮೀಪದ ಕೆರೆಗೆ ಹಾಕಿದ್ದಾರೆ. ನವೀನ್ ಕೆರೆಯಲ್ಲಿ ಉಸಿರುಗಟ್ಟಿ ಪ್ರಾಣಬಿಟ್ಟಿದ್ದಾನೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಇದು ಆತ್ಮಹತ್ಯೆ ಎಂದು ನಂಬಿಸಲು ನವೀನ್ ನ ಬೈಕ್, ಟಾರ್ಚ್ ಮತ್ತು ಚಪ್ಪಲಿಯನ್ನು ಕೆರೆಯ ದಂಡೆ ಮೇಲೆ ತಂದಿರಿಸಿದ್ದಾರೆ ಎನ್ನಲಾಗಿದೆ.



