ಮೂಡಿಗೆರೆ ಪಟ್ಟಣದ ರಸ್ತೆಯೊಂದರ ಗುಂಡಿಗಳಲ್ಲಿ ಮೀನು ಮಾರಾಟ ಮತ್ತು ಭತ್ತದ ಸಸಿ, ಬಾಳೆಗಿಡಗಳನ್ನು ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಗಿದೆ.
ಪಟ್ಟಣದ ಎಸ್.ಬಿ.ಎಂ. ಬ್ಯಾಂಕ್ ಮತ್ತು ಚರ್ಚ್ ಹಾಲ್ ನಡುವೆ ಹಾದುಹೋಗಿರುವ ಸುಮಾರು ನೂರು ಮೀಟರ್ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದು, ಇದರ ದುರಸ್ಥಿಗೆ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಖಂಡಿಸಿ ಪಟ್ಟಣದ ಸಚೇತನ ಯುವ ಸಂಘದ ವತಿಯಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಮೂಡಿಗೆರೆ ಮಂಗಳೂರು ಮತ್ತು ಮೂಡಿಗೆರೆ ಬೇಲೂರು ಹೆದ್ದಾರಿಗಳ ನಡುವೆ ಪ್ರಮುಖ ಸಂಪರ್ಕವಾಗಿರುವ ಈ ರಸ್ತೆಯು ಹಲವು ವರ್ಷಗಳಿಂದ ರಿಪೇರಿಯಾಗದೇ ಉಳಿದಿದೆ. ರಸ್ತೆಯ ತುಂಬೆಲ್ಲ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ವಾಹನ ಸವಾರರು ಪರದಾಡುಂತಾಗಿದೆ. ಪಟ್ಟಣದ ಹೃದಯಭಾಗದಲ್ಲಿ ಈ ರಸ್ತೆ ಅನೇಕ ವರ್ಷಗಳಿಂದ ಡಾಂಬಾರು, ಕಾಂಕ್ರೀಟ್ ಕಾಣದೆ ಅನಾಥವಾಗಿದೆ.

ಇತ್ತೀಚೆಗೆಂತು ಈ ರಸ್ತೆಯಲ್ಲಿ ಸಂಚಾರ ಮಾಡುವುದು ಬಹು ದುಸ್ತರವಾಗಿತ್ತು. ಇದನ್ನು ಕಂಡು ಪಟ್ಟಣದ ಸಚೇತನ ಯುವಕ ಸಂಘದ ಸದಸ್ಯರು ಇಂದು ವಿನೋತನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯ ಗುಂಡಿಯೊAದನ್ನು ಕೆರೆಯ ರೀತಿ ಪರಿವರ್ತಿಸಿ ಅದರಲ್ಲಿ ಮೀನುಗಳನ್ನು ಬಿಟ್ಟು ಮೀನು ಮಾರಾಟ ಮಾಡುವ ಅಣಕು ಪ್ರದರ್ಶನ, ಭತ್ತದ ಸಸಿ, ಬಾಳೆ, ಕೆಸುವಿನ ಎಲೆಯ ಗಿಡಗಳನ್ನು ನೆಟ್ಟು ಪ್ರತಿಭಟಿಸಿದರು. ಪಟ್ಟಣ ಪಂಚಾಯಿತಿ ಆಡಳಿತ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯಿತಿ ಪ್ರಬಾರ ಮುಖ್ಯಾಧಿಕಾರಿ ಚಂದ್ರಕಾAತ್ ಅವರು ಸ್ಥಳಕ್ಕಾಗಮಿಸಿ ಮನವಿ ಪತ್ರ ಸ್ವೀಕರಿಸಿದರು. ನಂತರ ನಗರೋತ್ಥಾನ ಯೋಜನೆಯಡಿ ರಸ್ತೆನಿರ್ಮಾಣ ಮಾಡುವ ಬಗ್ಗೆ ಮುತುವರ್ಜಿ ವಹಿಸುವುದಾಗಿ ತಿಳಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಸಚೇತನ ಯುವ ಸಂಘದ ಅಧ್ಯಕ್ಷ ರವಿರಾಜ್ ನಗರೋತ್ತಾನ ಯೋಜನೆಯಲ್ಲಿ ಕಳೆದ ವರ್ಷ ಪಪಂ ಖಾತೆಗೆ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬಂದಿದೆ. ಈ ಅನುದಾನವನ್ನು ವಿವಿಧ ರಸ್ತೆಗಳ ಅಭಿವೃದ್ಧಿಗೆ ವಿನಯೋಗಿಸಲು ಕ್ರಿಯಾಯೋಜನೆ ತಯಾರಿಸಿದ್ದರು ಅದು ನೆನೆಗುದಿಗೆ ಬಿದ್ದಿದೆ. ಪಟ್ಟಣದ ಮೈಸೂರು ಬ್ಯಾಂಕ್ ರಸ್ತೆ, ಕುವೆಂಪು ನಗರ, ಜೆ.ಎಂ.ರಸ್ತೆ, ವೇಣುಗೋಪಾಲಸ್ವಾಮಿ ದೇವಸ್ಥಾನ ರಸ್ತೆ, ಕುರುಕಮಕ್ಕಿ, ಪಪಂ ಕಚೇರಿಗೆ ತೆರಳುವ ರಸ್ತೆ, ಪಿ.ಬಿ.ರಸ್ತೆ, ಆದಿಶಕ್ತಿ ದೇವಸ್ಥಾನ ರಸ್ತೆ, ಛತ್ರಮೈದಾನ, ಸನ್ನಿಧಿ ಬಡಾವಣೆ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬಾರಿ ಗಾತ್ರದ ಗುಂಡಿಗಳಾಗಿವೆ. ಈ ಎಲ್ಲಾ ರಸ್ತೆಗಳಿಗೆ ಕಳೆದ 25 ವರ್ಷದ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಆನಂತರ ರಸ್ತೆಯ ಗುಂಡಿಗಳನ್ನು ಕೂಡ ಮುಚ್ಚಿಲ್ಲ ಎಂದು ದೂರಿದರು. ಗುಂಡಿಯಾದ ಎಲ್ಲಾ ರಸ್ತೆಯನ್ನು 15 ದಿನದಲ್ಲಿ ಅಭಿವೃದ್ಧಿಪಡಿಸಬೇಕು. ಅಧಿಕಾರಿಗಳು ಇದೇ ಚಾಳಿ ಮುಂದುವರಿಸಿದರೆ ಮೂಡಿಗೆರೆ ಪಟ್ಟಣ ಬಂದ್ ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಚೇತನ ಯುವ ಸಂಘದ ಕಾರ್ಯದರ್ಶಿ ನಿಶ್ಚಲ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಸಚೇತನ ಯುವ ಸಂಘದ ಪ್ರತಿಭಟನೆಗೆ ಸಾರ್ವಜನಿಕರು ಸಾಥ್ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.



