ಉದ್ಯಮಿಯೊಬ್ಬರಿಗೆ ಬೈಂದೂರು ಕ್ಷೇತ್ರದ ಎಂ.ಎಲ್.ಎ. ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಾಗ್ಮಿ ಚೈತ್ರಾ ಕುಂದಾಪುರ ಮತ್ತು ತಂಡದವರು 5 ಕೋಟಿ ಹಣವನ್ನು ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ(A2)ಯಾಗಿರುವ ಗಗನ್ ಕಡೂರು ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ (A3) ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಬಿ.ಜೆ.ಪಿ. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಗನ್ ಕಡೂರು ಎಂಬಾತ ಈ ಪ್ರಕರಣದ ಸೂತ್ರದಾರ ಆಗಿದ್ದ ಎನ್ನಲಾಗಿದೆ. ಚೈತ್ರಾ ಕುಂದಾಪುರ ಗಗನ್ ನನ್ನು ಮುಂದಿಟ್ಟುಕೊಂಡು ಉದ್ಯಮಿ ಯಿಂದ ಕೋಟಿ ಹಣವನ್ನು ವಸೂಲಿ ಮಾಡಿ ಮೋಸ ಮಾಡಿದ್ದು, ಉದ್ಯಮಿ ಸುಮಾರು 3.5 ಕೋಟಿ ಹಣವನ್ನು ನೇರವಾಗಿ ಗಗನ್ ಕೈಗೆ ನೀಡಿದ್ದರು ಎನ್ನಲಾಗಿದೆ.
ಈ ಗಗನ್ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನವನಾಗಿದ್ದು ಬಿ.ಜೆ.ಪಿ.ಯಲ್ಲಿ ತನ್ನನ್ನು ಗುರುತಿಸಿಕೊಂಡಿದ್ದ. ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ. ಆದರೆ ಈತ ಉದ್ಯಮಿ ಗೋವಿಂದ ರಾಜು ಪೂಜಾರಿ ಯವರಿಗೆ ಮೋಸ ಮಾಡಿರುವ ವಿಷಯವನ್ನು ಗೋವಿಂದ ಬಾಬುರವರು ಬಿ.ಜೆ.ಪಿ. ಮುಖಂಡರಿಗೆ ಮೌಖಿಕವಾಗಿ ತಿಳಿಸಿದ್ದರಿಂದ ಒಂದು ತಿಂಗಳ ಹಿಂದೆಯೇ ಈತನನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿಮುಕ್ತಿಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.
ಈತ ಕಾರ್ಯಕ್ರಮವೊಂದಕ್ಕೆ ಭಾಷಣ ಮಾಡಲು ಬಂದಿದ್ದ ಚೈತ್ರಾ ಕುಂದಾಪುರ ಅವರನ್ನು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಹಾಗಾಗಿ ಚೈತ್ರಾ ಕುಂದಾಪುರ ಈತನನ್ನು ಈ ವಂಚನೆಯ ಕಾರ್ಯಕ್ಕೆ ತೊಡಗಿಸಿಕೊಂಡಿದ್ದಳು ಎನ್ನಲಾಗಿದೆ. ಈ ವಂಚನೆಗೆ ಆರ್.ಎಸ್.ಎಸ್. ನಾಯಕರು ಮತ್ತು ಬಿ.ಜೆ.ಪಿ. ಕೇಂದ್ರ ನಾಯಕರ ಪಾತ್ರಕ್ಕೆ ಈತನೇ ವ್ಯಕ್ತಿಗಳನ್ನು ತಯಾರಿ ಮಾಡಿದ್ದ ಎನ್ನಲಾಗಿದೆ. ಕಡೂರಿನ ಒಂದು ಸಲೂನ್ ಶಾಫ್ ನಲ್ಲಿ ವ್ಯಕ್ತಿಗಳಿಗೆ ಮೇಕಪ್ ಮಾಡಿ ನಾಯಕರಂತೆ ತಯಾರಿ ಮಾಡಿಸಿ ಒಟ್ಟಾರೆ ಪ್ರಕರಣವನ್ನು ಈತನೇ ನಿಯಂತ್ರಿಸಿದ್ದ ಎನ್ನಲಾಗಿದೆ.
ಪ್ರಕರಣದ ಮೂರನೇ ಆರೋಪಿ ಹೊಸಪೇಟೆ ಸಮೀಪದ ಮಠವೊಂದರ ಸ್ವಾಮೀಜಿ ಅಭಿನವ ಹಾಲಶ್ರೀ ಸ್ವಾಮೀಜಿಯೂ ಅವರೊಂದಿಗೆ ಸಾಥ್ ನೀಡಿದ್ದು ಉದ್ಯಮಿಯಿಂದ ನೇರವಾಗಿ ಒಂದೂವರೆ ಕೋಟಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಇದೀಗ ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆ ಹಾಲಶ್ರೀ ಸ್ವಾಮಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಒಟ್ಟಾರೆ ದೊಡ್ಡಮಟ್ಟದ ಮೋಸದ ಜಾಲವನ್ನು ಹೆಣೆದು ಸಿನಿಮೀಯ ರೀತಿಯಲ್ಲಿ ಕತೆಗಳನ್ನು ಕಟ್ಟಿ ಉದ್ಯಮಿಯಿಂದ 5 ಕೋಟಿ ಹಣ ಪಡೆದು ಪಂಗನಾಮ ಹಾಕಿದ್ದವರು ಈಗ ಕಂಬಿ ಎಣಿಸುವಂತಾಗಿದೆ.



