ತಾಲ್ಲೂಕು ವೈದ್ಯಾಧಿಕಾರಿಯೊಬ್ಬ ಮಹಿಳೆಯೊಂದಿಗೆ ಏಕಾಂತದಲ್ಲಿ ಇದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಮಹಿಳೆಯ ಪತಿ ಹಾಗೂ ಕುಟುಂಬಸ್ಥರಿಂದ ಹಿಗ್ಗಾಮುಗ್ಗ ಪೆಟ್ಟು ತಿಂದ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದೆ. ಎನ್.ಆರ್.ಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿರುವ ಮತ್ತು ಎನ್.ಆರ್.ಪುರ ತಾಲ್ಲೂಕು ವೈದ್ಯಾಧಿಕಾರಿಯಾಗಿರುವ ಡಾ. ಎಲ್ಡೋಸ್ ಮಹಿಳೆಯೊಂದಿಗೆ ಸಿಕ್ಕಿಬಿದ್ದು ಪೆಟ್ಟು ತಿಂದಾತ.
ಡಾ. ಎಲ್ಡೋಸ್ ಮಹಿಳೆಯೊಬ್ಬರನ್ನು ಬಾಳೆಹೊನ್ನೂರಿಗೆ ಕರೆತಂದು ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಆಕೆಯೊಂದಿಗೆ ಏಕಾಂತದಲ್ಲಿ ಇದ್ದಾಗ ಮಹಿಳೆಯ ಪತಿ ಮತ್ತು ಕುಟುಂಬದವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಮಹಿಳೆಯನ್ನು ವಸತಿಗೃಹಕ್ಕೆ ಕರೆತಂದಿರುವ ವಿಷಯ ತಿಳಿದ ಮಹಿಳೆಯ ಪತಿ ಮತ್ತು ಕುಟುಂಬದವರು ಸ್ಥಳಕ್ಕೆ ಆಗಮಿಸಿ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾರೆ. ವೈದ್ಯನ ಮೇಲೆ ಕುಟುಂಬದವರು ಹಲ್ಲೆ ಮಾಡುತ್ತಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಡಾ.ಎಲ್ಡೋಸ್ ಈ ಹಿಂದೆ ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದ ಎಂದು ತಿಳಿದುಬಂದಿದೆ. ಹೆರಿಗೆ ಪ್ರಕರಣದಲ್ಲಿ ತಾಯಿಮಗು ಸಾವಿಗೆ ಕಾರಣರಾಗಿದ್ದು, ಗಲಾಟೆಯಾಗಿ ಸಸ್ಪೆಂಡ್ ಆಗಿ ನಂತರ ಎನ್.ಆರ್.ಪುರ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಎನ್.ಆರ್. ಮೂಲದವರೇ ಆದ ಡಾ. ಎಲ್ಡೋಸ್ ಈ ಹಿಂದೆಯೂ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಪ್ರಕರಣಗಳು ನಡೆದಿದ್ದವು ಎನ್ನಲಾಗಿದೆ.
ಡಾ. ಎಲ್ಡೋಸ್ ಚಿಕ್ಕಮಗಳೂರು ಜಿಲ್ಲಾ ವೈದ್ಯರ ಸಂಘದ ಪದಾಧಿಕಾರಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ.
ಇದೀಗ ಪ್ರಕರಣ ಬಾಳೆಹೊನ್ನೂರು ಠಾಣೆ ಮೆಟ್ಟಿಲೇರಿದೆ. ಇಂತಹ ನೀಚ ಕೃತ್ಯದಲ್ಲಿ ತೊಡಗಿರುವ ವೈದ್ಯನನ್ನು ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



