ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಯವರು ಓಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು) ಎನ್ನುವ ಘೋಷವಾಕ್ಯದ ಅಡಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಚಿಕ್ಕಮಗಳೂರಿನ ಕುಂಬಾರ ಬೀದಿಯಲ್ಲಿ ಮಣ್ಣಿನಿಂದ ಸ್ಥಳೀಯರು ಮಾಡಿದ ದೀಪಗಳನ್ನು ಖರೀದಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಕನಸಿನ ಯೋಜನೆಯಂತೆ ನಮ್ಮ ದೇಶಿಯ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳೀಯರು ತಯಾರಿಸಿದ ಪರಿಕರಗಳನ್ನು ಹೆಚ್ಚು ಹೆಚ್ಚು ಖರೀದಿಸುವ ನಿಟ್ಟಿನಲ್ಲಿ ಈ ಓಕಲ್ ಫಾರ್ ಲೋಕಲ್ ಎಂಬ ಅಭಿಯಾನ ಆರಂಭಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆಯವರು ನಮ್ಮ ಸ್ಥಳೀಯ ಆರ್ಥಿಕತೆ ವೃದ್ಧಿಯಾಗಬೇಕೆಂದರೆ ನಾವು ಸ್ಥಳೀಯ ಉತ್ಪಾದಕರು ಮತ್ತು ವ್ಯಾಪಾರಸ್ಥರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳಿಗಿಂತ ಸ್ಥಳೀಯ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸಬೇಕು. ನಮ್ಮ ಗ್ರಾಮೀಣ ಪ್ರದೇಶದ ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸ್ಥಳೀಯ ಕೃಷಿ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಖರೀದಿಸಬೇಕು ಆಗ ಸರ್ವತೋಮುಖ ಆರ್ಥಿಕ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು. ಇದೀಗ ದೀಪಾವಳಿ ಹಬ್ಬದಲ್ಲಿ ಹಬ್ಬಕ್ಕೆ ಸಂಬಂಧಿಸಿದ ಖರೀದಿಯಲ್ಲಿ ಸ್ಥಳೀಯ ವ್ಯಾಪರಸ್ಥರಿಗೆ ಬೆಂಬಲ ನೀಡುವಂತೆ, ದೀಪಾವಳಿಯಲ್ಲಿ ಸ್ಥಳೀಯರು ಮಾಡಿದ ಮಣ್ಣಿನ ದೀಪಗಳನ್ನು ಬಳಸುವಂತೆ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಹೆಚ್.ಸಿ. ಕಲ್ಮುರುಡಪ್ಪ ಸೇರಿದಂತೆ ಬಿ.ಜೆ.ಪಿ. ಮುಖಂಡರು ಉಪಸ್ಥಿತರಿದ್ದರು.


