ಪ್ರೇಯಸಿಯೊಂದಿಗಿನ ಲವ್ ಬ್ರೇಕಪ್ ನಿಂದ ಕುಪಿತಗೊಂಡ ಯುವಕನೋರ್ವ ಯುವತಿಯ ಕತ್ತುಸೀಳಿ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಸುಚಿತ್ರಾ(21), ಕೊಲೆಯಾದ ಯುವತಿ, ತೇಜಸ್, ಕೊಲೆ ಆರೋಪಿಯಾಗಿದ್ದಾನೆ. ಇವರಿಬ್ಬರು ಹಾಸನ ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಾಗಿದ್ದರು.
ಲವ್ ಬ್ರೇಕಪ್ ಹಿನ್ನಲೆಯಲ್ಲಿ ಮಾತನಾಡಿಸಲು ಬೆಟ್ಟದ ಸಮೀಪಕ್ಕೆ ಕರೆಸಿ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತೇಜಸ್ ತನ್ನ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡುತ್ತಿದ್ದ ಸುಚಿತ್ರಾಳನ್ನು ಪ್ರೀತಿಸುತ್ತಿದ್ದ, ಸುಚಿತ್ರಾ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳು. ಆರೋಪಿಯೂ ಅದೇ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಆಕೆಯ ಸೀನಿಯರ್ ಆಗಿದ್ದ. ಇಬ್ಬರಲ್ಲಿ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿ ಪ್ರೀತಿಯುಂಟಾಗಿತ್ತು.
ಯುವತಿ ಆತ ತನ್ನ ವಿಚಾರದಲ್ಲಿ ನಿರಂತರ ಹಸ್ತಕ್ಷೇಪ ಮಾಡುತ್ತಿದ್ದಾನೆ ತನ್ನ ಹಿನ್ನೆಲೆ ಮತ್ತು ಹಿಂದಿನ ಸಂಬಂಧವನ್ನು ಪದೇ ಪದೇ ಖ್ಯಾತೆ ತೆಗೆಯುವ ಬಗ್ಗೆ ಮತ್ತು ಆ ವಿಷಯವನ್ನಿಟ್ಟುಕೊಂಡು ಜಗಳ ಮಾಡುತ್ತಿದ್ದುದಕ್ಕೆ ಅವಳು ಅಸಮಾಧಾನಗೊಂಡು ಆತನೊಂದಿಗೆ ಸ್ನೇಹವನ್ನು ಕೊನೆಗೊಳಿಸಲು ಬಯಸಿದ್ದಳು ಎನ್ನಲಾಗಿದೆ.
ನವೆಂಬರ್ 16ರಂದು ಗುರುವಾರ ತಮ್ಮ ನಡುವಿನ ಸಮಸ್ಯೆಗಳನ್ನು ಚರ್ಚಿಸುವ ನೆಪದಲ್ಲಿ, ತೇಜಸ್ ಸುಚಿತ್ರಾಳನ್ನು ಹಾಸನ ಪಟ್ಟಣಕ್ಕೆ ಕರೆದು ಅಲ್ಲಿಂದ ತನ್ನ ಬೈಕ್ ನಲ್ಲಿ ನಗರದಿಂದ ಸುಮಾರು 13 ಕಿ.ಮೀ ದೂರದ ಕುಂತಿಬೆಟ್ಟದ ಬಳಿ ಕರೆದೊಯ್ದಿದ್ದಾನೆ. ಅಲ್ಲಿಗೆ ಬಂದ ನಂತರ ಕೂಡ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಈ ವೇಳೆ ತೇಜಸ್ ಅವನ ಬ್ಯಾಗಿನಲ್ಲಿದ್ದ ಚಾಕು ತೆಗೆದು ಅವಳ ಕತ್ತು ಸೀಳಿದ್ದಾನೆ.
ಘಟನೆ ನಡೆದ ಕೂಡಲೇ ಗಾಯಗೊಂಡ ಯುವತಿಯನ್ನು ಅಲ್ಲಿಯೇ ಬಿಟ್ಟು ತನ್ನ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯ ಕೆಲವರು ಗಾಯಗೊಂಡಿದ್ದ ಯುವತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು,ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಆರೋಪಿ ತೇಜಸ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದು ಆತನನ್ನು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಯಾದ ಸುಚಿತ್ರ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕವಳಕೆರೆ ಗ್ರಾಮದ ಲೋಕೇಶ್ ಎಂಬುವವರ ಪುತ್ರಿ. ಲೋಕೇಶ್ ಹಾಸನ ಪಟ್ಟದಲ್ಲಿ ಬಾಡಿಗೆ ಮನೆ ಮಾಡಿ ಗೂಡ್ಸ್ ಆಟೋ ಓಡಿಸುತ್ತಾ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದರು. ಕೊಲೆ ಆರೋಪಿ ತೇಜರ್ ಹಾಸನ ತಾಲ್ಲೂಕಿನ ಶಂಕರನಹಳ್ಳಿ ಗ್ರಾಮದ ಕೃಷ್ಣೇಗೌಡ ಎಂಬುವವರ ಪುತ್ರ ಎಂದು ತಿಳಿದುಬಂದಿದೆ.



