oplus_0
ವಿಜಯದಶಮಿಯ 9 ದಿನದ ಶ್ರೀ ದುರ್ಗಾ ದೇವಿಯ ಪೂಜೆಯ ಫಲ ಎಲ್ಲರಿಗೂ ದೊರಕುವಂತಾಗಿಲಿ ಎಂದು ಮೂಡಿಗೆರೆ ಶ್ರೀ ದುರ್ಗಾ ಸೇವಾ ಸಮಿತಿ ಗೌರವಾಧ್ಯಕ್ಷೆ ಹಾಗೂ ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಗುರುವಾರ ಸಂಜೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿವಿಧ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಬಾಗೀನ ಕೊಟ್ಟು ಮಾತನಾಡಿದರು.
ಕಳೆದ 21 ವರ್ಷದಿಂದ ಶ್ರೀ ದುರ್ಗಾದೇವಿ ಉತ್ಸವ ಆಚರಿಸಿಕೊಂಡು ಬರುತ್ತಿದ್ದು, ಯಾವುದೇ ರಾಜಕೀಯ ಪ್ರೇರಿತವಿಲ್ಲದೇ ಪ್ರತಿ ವರ್ಷ ತನ್ನ ತಾಯಿ ಮೋಟಮ್ಮ ಅವರು ಮಹಿಳೆಯರಿಗೆ ಬಾಗೀನ ಕೊಡುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಈ ಕಾರ್ಯವನ್ನು ತಾನು ಮುಂದುವರೆಸುತ್ತಿದ್ದೇನೆಂದು ಹೇಳಿದರು.
ಬಾಗೀನ ಕೊಡುವ ಮಹತ್ವವಾದ ಕಾರ್ಯವನ್ನು ಕೆಲವರು ರಾಜಕೀಯ ದೃಷ್ಟಿಯಿಂದ ಬಿಂಬಿಸುತ್ತಿದ್ದಾರೆ. ಅದಕ್ಕೆ ಕಿವಿಕೊಡಬಾರದು. ಸೀರೆ ಕೊಡುವುದಕ್ಕೂ, ಬಾಗೀನ ಕೊಡುವುದಕ್ಕೂ ಅರ್ಥ ಬೇರೆ ಇದೆ ಎಂದ ಅವರು, ದೇವಿ ಸ್ವರೂಪವಾಗಿರುವ ಮಹಿಳೆಯರು ಜೀವನದುದ್ದಕ್ಕೂ ತಮ್ಮ ಮನೆ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕೆಂದು ಹೇಳಿದರು.
ಸಮಿತಿಯ ಅಧ್ಯಕ್ಷೆ ಮೋಟಮ್ಮ, ಕಾರ್ಯಾಧ್ಯಕ್ಷ ಕೆ.ಮಂಚೇಗೌಡ, ಪ.ಪಂ. ಅಧ್ಯಕ್ಷೆ ಗೀತಾ ರಂಜನ್ ಅಜಿತ್ಕುಮಾರ್, ಉಪಾಧ್ಯಕ್ಷ ಎಚ್.ಪಿ.ರಮೇಶ್, ತಾ.ಪಂ. ಮಾಜಿ ಸದಸ್ಯೆ ಸುಧಾ, ಹಳೆಮೂಡಿಗೆರೆ ಗ್ರಾ.ಪಂ. ಸದಸ್ಯೆ ಜಾನಕಿ, ನಿರ್ಮಲ ಮಂಚೇಗೌಡ, ಕಮಲಮ್ಮ, ಕಲ್ಪನಾ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.



