ಮಾರುತಿ ಕಾರಿನಲ್ಲಿ ಗೋವೊಂದನ್ನು ಕದ್ದು ಸಾಗಿಸಲು ಪ್ರಯತ್ನಿಸಿದ ಘಟನೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ.
KA02N2402 ಮಾರುತಿ ಸುಜುಕಿ 800 ಬಿಳಿ ಬಣ್ಣದ ಕಾರಿನಲ್ಲಿ ಕಾಲು ಕಟ್ಟಿ ಗೋವನ್ನು ಸಾಗಿಸಲಾಗುತ್ತಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಜಗದೀಶ್ ಅವರ ನೇತೃತ್ವದಲ್ಲಿ ಹಾನುಬಾಳು ಸಕಲೇಶಪುರ ರಸ್ತೆಯಲ್ಲಿ ಗಾಣದಹೊಳೆ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣದ 800 ಕಾರನ್ನು ತಡೆದಿದ್ದಾರೆ.
ವಾಹನ ನಿಲ್ಲಿಸದೆ ವೇಗವಾಗಿ ಹೆನ್ನಲ್ಲಿ ಗ್ರಾಮದ ಕಡೆ ಹೋದ ಕಾರನ್ನು ಹಿಂಬಾಲಿಸಿ ತಡೆಯುವಲ್ಲಿ ನಗರ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಅವರು ಯಶಸ್ವಿಯಾಗಿದ್ದಾರೆ. ಕಾರಿನಲ್ಲಿ ಇದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಕಾರಿನಲ್ಲಿ ತುಂಬಿದ ಹೋರಿಯನ್ನು ರಕ್ಷಣೆ ಮಾಡಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗೋವನ್ನು ಮಾಂಸಕ್ಕಾಗಿ ಹತ್ಯೆ ಮಾಡಲು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ರಸ್ತೆಬದಿಯಲ್ಲಿ ಮೇಯುತ್ತಿದ್ದ ಜಾನುವಾರನ್ನು ಕದ್ದು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಕಾಲು ಕಟ್ಟಿ ಇಕ್ಕಟ್ಟಿನಲ್ಲಿ ಗೋವನ್ನು ತುಂಬಿದ್ದರಿಂದ ಅದು ತೀವ್ರವಾಗಿ ನಿತ್ರಾಣಗೊಂಡಿದ್ದು, ಚಿಕಿತ್ಸೆ ಕೊಡಿಸಿ ಗೋಶಾಲೆಗೆ ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



