Untitled design - 1
ಸ್ಟಾಕ್ ಮಾರ್ಕೇಟ್ ಟ್ರೇಡಿಂಗ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ದ ವಂಚಕರು ಪೊಲೀಸರ ಬಲೆಗೆ ಬಿದಿದ್ದಾರೆ. ಈ ಜಾಲದಲ್ಲಿ ಕೈ ಜೋಡಿಸಿದ Axis ಬ್ಯಾಂಕ್ ಮ್ಯಾನೇಜರ್, ನಾಲ್ವರು ಬ್ಯಾಂಕ್ ಸಿಬ್ಬಂದಿ ಸೇರಿ 8 ಮಂದಿ ಜೈಲು ಸೇರಿದ್ದಾರೆ. ಟ್ರೆಡಿಂಗ್ ಹೆಸರಿನಲ್ಲಿ ಬರೊಬ್ಬರಿ 265 ಜನರಿಗೆ 97 ಕೋಟಿ ರೂಪಾಯಿ ನಾಮ ಹಾಕಲಾಗಿದೆ.
ಬೆಂಗಳೂರು ನಾಗರಬಾವಿ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಕಿಶೋರ್ ಸಾಹು, ಸೇಲ್ಸ್ ಮ್ಯಾನ್ ಗಳಾದ ಮನೋಹರ್, ಕಾರ್ತಿಕ್, ರಾಕೇಶ್ ಪೊಲೀಸರ ಬಲೆಗೆ ಬಿದಿದ್ದಾರೆ. ಹಾಗೂ ಅಕೌಂಟ್ ಹೊಲ್ಡರ್ ಗಳಾದ ರಘುರಾಜ್, ಕಾರ್ತಿಕ್, ಲಕ್ಷ್ಮಿಕಾಂತ, ಕೆಂಚೇಗೌಡ ಹಾಗು ಮಾಲಾ ಎಂಬಾಕೆಯನ್ನ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದವರು ಎಂದು ತಿಳಿದುಬಂದಿದೆ.
ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಲು ಜನರಿಗೆ ಸೇಲ್ಸ್ ಮೆನ್ ಗಳು ಪ್ರಚೋದನೆ ನೀಡ್ತಿದ್ರು. ಆಕರ್ಷಕ ಸ್ಕೀಂಗಳನ್ನ ನಂಬಿದ ಜನರು ಲಕ್ಷಾಂತರ ಹಣವನ್ನು ಹೂಡಿಕೆ ಮಾಡ್ತಿದ್ರು. ನಂತರ ಅವರ ನಕಲಿ ಟ್ರೇಡಿಂಗ್ ಅಕೌಂಟ್ ನಲ್ಲಿ ಕೋಟಿ ಲೆಕ್ಕದಲ್ಲಿ ಹಣ ತೋರಿಸಿ ವಂಚನೆ ಮಾಡ್ತಿದ್ರು. ಅದೇ ರೀತಿ ದೂರುದಾರನ ಟ್ರೇಡಿಂಗ್ ಅಕೌಂಟ್ ನಲ್ಲಿ 28 ಕೋಟಿ ತೋರಿಸಿದ್ರು. ಆದರೆ ಇದನ್ನ ಡ್ರಾ ಮಾಡಿಕೊಳ್ಳಲು 75 ಲಕ್ಷ ಕೊಡಬೇಕು ಎಂದು ಆಸೇ ತೋರಿಸಿ ಗ್ರಾಹಕರಿಂದ ಹಣ ಹಾಕಿಸಿಕೊಳ್ತಿದ್ರು.
ಗ್ರಾಹಕರು ಟ್ರಾನ್ಸ್ಫರ್ ಮಾಡುವ ಹಣವು ನಾಗರಭಾವಿಯಲ್ಲಿರುವ ಖಾಸಗಿ ಬ್ಯಾಂಕ್ ನ ಟ್ರೇಡಿಂಗ್ ಅಕೌಂಟ್ ಗೆ ಬೀಳ್ತಿತ್ತು. ಈ ಅಕೌಂಟ್ ಹೋಲ್ಡರ್ ಆಗಿ ಕೆಂಚೇಗೌಡ, ಮಾಲ, ಲಕ್ಷ್ಮಿಕಾಂತ ಹಾಗು ರಘು ಹೆಸರಿನಲ್ಲಿರ್ತಿತ್ತು. ಇದಕ್ಕೆ ಸಾಥ್ ನೀಡ್ತಿದ್ದಿದ್ದು ಬ್ಯಾಂಕ್ ಮ್ಯಾನೇಜರ್ ಕಿಶೋರ್ ಸಾಹು ಕಮೀಷನ್ ರೂಪದಲ್ಲಿ ತನ್ನ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಿಕೊಳ್ತಿದ್ದ. ಸದ್ಯ ಆರು ಜನರ ಅಕೌಂಟ್ ನಲ್ಲಿದ್ದ 28 ಲಕ್ಷ ಹಣವನ್ನ ಫ್ರೀಝ್ ಮಾಡಲಾಗಿದೆ. ಮತ್ತಷ್ಟು ವಂಚನೆಯಾಗಿರುವುದರ ಬಗ್ಗೆ ಮಾಹಿತಿ ಇದ್ದು ಸೈಬರ್ ಪೊಲೀಸರು ಮತ್ತಷ್ಟು ವಿಚಾರಣೆ ಮುಂದುವರೆಸಿದ್ದಾರೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿಐಪಿ ಷೇರು ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿವೆ. ಆದರೆ ಇಂತಹ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯುಟಿವ್ ಬಂಧನಕ್ಕೊಳಗಾಗಿರುವುದು ಮಾತ್ರ ಮೊದಲ ಬಾರಿಗೆ.
ಯಲಹಂಕದ ವ್ಯಕ್ತಿ ನೀಡಿದ್ದ ದೂರಿನ ತನಿಖೆ ಕೈಗೊಂಡಿದ್ದ ಪೊಲೀಸರು ಎರಡು ಬ್ಯಾಂಕ್ ಖಾತೆಗಳು ನಾಗರಭಾವಿಯ ಆಕ್ಸಿಸ್ ಬ್ಯಾಂಕ್ನಲ್ಲಿ ಇರುವ ಕುರಿತು ಮಾಹಿತಿ ಪಡೆದರು. ಆಗ ನೋಡಿದರೆ ಚಿಕ್ಕಮಗಳೂರಿನ ಇಬ್ಬರ ಹೆಸರಿನಲ್ಲಿ ಖಾತೆ ತೆರೆಯಲಾಗಿತ್ತು, ಯಾವುದೇ ಸರಿಯಾದ ವಿಳಾಸದ ದೃಢೀಕರಣದ ದಾಖಲೆಗಳು ಇರಲಿಲ್ಲ. ಆಗ ತನಿಖೆ ಮುಂದುವರೆಸಿದ ಪೊಲೀಸರಿಗೆ ಇದೇ ಮಾದರಿಯಲ್ಲಿ ಇನ್ನೂ 4 ಖಾತೆ ಇರುವುದು ತಿಳಿಯಿತು ಅಲ್ಲದೇ 6 ಖಾತೆಗಳಿಗೆ 97 ಕೋಟಿ ರೂ. ವರ್ಗಾವಣೆಯಾಗಿತ್ತು. ಬ್ಯಾಂಕ್ ಮ್ಯಾನೇಜರ್ ಮತ್ತು ಸೇಲ್ಸ್ ಎಕ್ಸಿಕ್ಯುಟಿವ್ ಬಂಧಿಸಿ ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬಯಲಾಗಿದೆ ಮತ್ತು ಅದು ಚಿಕ್ಕಮಗಳೂರು ತನಕ ಬಂದಿದೆ.
ಚಿಕ್ಕಮಗಳೂರಿನ ಕಡೂರು ಮೂಲದ ಓರ್ವ ಮಹಿಳೆ ಸೇರಿ ನಾಲ್ವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ವಂಚಿಸಲಾಗಿದೆ. ಗ್ರಾಹಕರಿಗೆ ವಂಚನೆ ಮಾಡಿದ ಹಣವನ್ನು ಈ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಒಟ್ಟು 8 ಜನರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ.



