2009-10ರ ಅವಧಿಯಲ್ಲಿ ಬೇಲೆಕೇರಿ ಬಂದರಿನಿಂದ ವಶಪಡಿಸಿಕೊಂಡ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿ ಅಕ್ರಮವಾಗಿ ರಫ್ತು ಮಾಡಿದ್ದಕ್ಕಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಭಾರಿ ಮೊತ್ತದ ದಂಡವನ್ನು ವಿಧಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಕ್ಟೋಬರ್ 24 ರಂದು ಕಾರವಾರದ ಶಾಸಕ ಮತ್ತು ಇತರ ಆರು ಆರೋಪಿಗಳನ್ನು ದೋಷಿ ಎಂದು ಘೋಷಿಸಿತ್ತು.
ಎರಡು ಬಾರಿ ಎಂಎಲ್ಎ ಆಗಿರುವ ಸೈಲ್ ಶಿಕ್ಷೆಗೆ ಗುರಿಯಾಗಿರುವುದರಿಂದ ವಿಧಾನಸಭೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಇದೆ.
ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ, ಸೈಲ್ ಕಳ್ಳತನ, ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಆರೋಪದ ಮೇಲೆ ಶಿಕ್ಷೆಗೊಳಗಾಗಿದ್ದಾರೆ.
ಬಳ್ಳಾರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು 2010ರಲ್ಲಿ ಬೇಲೇಕೇರಿ ಬಂದರಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ, ಆರೋಪಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಅದಿರನ್ನು ಚೀನಾಗೆ ಕಳ್ಳಸಾಗಣೆ ಮಾಡಿದ್ದಾರೆ.
ಬಂದರುಗಳ ಉಪ ಸಂರಕ್ಷಣಾಧಿಕಾರಿ ಮಹೇಶ್ ಜೆ ಬಿಳಿಯೆ, ಆಶಾಪುರ ಮಿನೆಚೆಮ್ ಎಂಡಿ ಚೇತನ್ ಶಾ, ಕೆವಿ ನಾಗರಾಜ್ ಅಲಿಯಾಸ್ ಸ್ವಸ್ತಿಕ್ ನಾಗರಾಜ್, ಕೆವಿಎನ್ ಗೋವಿಂದರಾಜ್, ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಮಹೇಶ್ ಕುಮಾರ್ ಮತ್ತು ಲಾಲ್ ಮಹಲ್ ಲಿಮಿಟೆಡ್ ಎಂಡಿ ಪ್ರೇಮ್ ಚಂದ್ ಗಾರ್ಗ್ ಅವರು ಪ್ರಕರಣದ ಇತರ ಅಪರಾಧಿಗಳಾಗಿದ್ದಾರೆ.
ಸತೀಶ್ ಸೈಲ್ ಶಾಸಕ ಸ್ಥಾನಕ್ಕೆ ಕುತ್ತು!
ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದರೆ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಂತಹದರಲ್ಲಿ ಸತೀಶ್ ಸೈಲ್ ಗೆ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.
ಈ ಪ್ರಕರಣ ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.



