ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಸಂಬಂಧ ಹತ್ತು ಹಲವು ಮಾಹಿತಿಗಳು ಹರಿದಾಡುತ್ತಿವೆ. ಸದ್ಯ ಕೊಪ್ಪ-ಶೃಂಗೇರಿ-ಕಳಸ ತಾಲೂಕಿನ ಕಾಡು-ಕಾಡಂಚಿನಲ್ಲಿ ತೀವ್ರ ಶೋಧ ನಡೆಯುತ್ತಿದ್ದು ಡಾಗ್ ಸ್ಕ್ವಾಡ್ ನೊಂದಿಗೆ ಮಲೆನಾಡಲ್ಲಿ ಎ.ಎನ್.ಎಫ್ ಹೈ ಅಲರ್ಟ್ ಆಗಿದೆ. ಈ ನಡುವೆ ಶೃಂಗೇರಿಯಲ್ಲಿ ಬೀಡು ಬಿಟ್ಟಿದ್ದ ಎ.ಎನ್.ಎಫ್. ಎಸ್ಪಿ, ಚಿಕ್ಕಮಗಳೂರು ಎಸ್ಪಿ ಹಾಗೂ ಪಶ್ಚಿಮ ವಲಯ ಐಜಿಪಿ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ.
ಕಳೆದ ಒಂದು ವಾರದಿಂದ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದವು. ಇದೀಗ ನಕ್ಸಲರ ಚಟುವಟಿಕೆ ಕೊನೆಗೂ ದೃಢಪಟ್ಟಿದೆ. ಅಲ್ಲಿ ಬಂದರು ಇಲ್ಲಿ ಹೋದರು ಎಂಬೆಲ್ಲಾ ಊಹಾಪೋಹಗಳಿಗೆ ಕಡೆಗೂ ಖಾತ್ರಿ ದೊರೆತಿದೆ. ಮುಂಡಗಾರು ಲತಾ ಟೀಮ್ ಮೇಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಗ್ರಾಮವೊಂದರ ಮನೆಗೆ ಬಂದು ಗನ್ ತೋರಿಸಿ ಊಟ ಮಾಡಿ ಹೋಗಿರುವುದು ಖಚಿತಗೊಂಡಿದೆ.
ಮಲೆನಾಡಲ್ಲಿ ಮತ್ತೆ ನಕ್ಸಲರ ಚಟುವಟಿಕೆ ಆರಂಭವಾಗಿದೆ ಶೃಂಗೇರಿ ಸುತ್ತಮುತ್ತಲಿನ ಹಳ್ಳಿಗಳಿಗೆ ಬಂದು ಜನರನ್ನ ಹೆಸರಿಸಲು ನಕ್ಸಲರು ಮುಂದಾಗಿದ್ದಾರೆ. ಹಾರ್ಡ್ ಕೋರ್ ನಕ್ಸಲ್ ಮುಂಡಗಾರು ಲತಾ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಯುಎ.ಪಿಎ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ ಎ.ಎನ್.ಎಫ್. ಡಿವೈಎಸ್ಪಿ ದೂರಿನ ಹಿನ್ನೆಲೆ ಎಫ್ಐಆರ್ ಆಗಿದ್ದು ಮುಂಡಗಾರು ಲತಾ, ಜಯಣ್ಣ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ,
ಮನೆಗೆ ಬಂದು ಗನ್ ತೋರಿಸಿ ಊಟ ಮಾಡಿ ಹೋದ ಮುಂಡಗಾರು ಲತಾ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗುತ್ತಿದ್ದಂತೆ ಸ್ಥಳದಿಂದ ನಕ್ಸಲರು ನಾಪತ್ತೆಯಾಗಿದ್ದಾರೆ ಈ ವೇಳೆ ಸ್ಥಳದಲ್ಲಿ 3 ಗನ್ ಹಾಗೂ ಗುಂಡುಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡ ನಕ್ಸಲರಿಗಾಗಿ ಸ್ಥಳಿಯ ಪೊಲೀಸರ ಜೊತೆ ಎ.ಎನ್.ಎಫ್. ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರು ಎಸ್ಪಿಯವರು ಪತ್ರಿಕಾ ಪ್ರಕಟಣೆ ನೀಡಿದ್ದು, : (ANF) ನಕ್ಸಲ್ ನಿಗ್ರಹದಳದ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಡೇಗುಂದಿ ಗ್ರಾಮದ ಅರಣ್ಯ ವ್ಯಾಪ್ತಿಯ ಸುಬ್ಬಗೌಡ ರ ಒಂಟಿಮನೆಯಲ್ಲಿ ನಕ್ಸಲ್ ರಾದ ಮುಂಡಗಾರು ಲತಾ, ಜಯಣ್ಣ ಹಾಗೂ ಇತರರ ಅನುಮಾನಾಸ್ಪದ ಚಲನವಲನ ಕಂಡುಬಂದ ಮೇರೆಗೆ ಪಿರ್ಯಾದುದಾರರು ನೀಡಿದ ದೂರಿನನ್ವಯ ಜಯಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ:32/2024 329(4),351(2), 61(2),147, r/w 3(5) BNS 3&25 Arms act, 110(B),13,16, 18,20,38 UAPA 1967 ( ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ) ಕಾಯ್ದೆ ರಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. (DySP) ಪೊಲೀಸ್ ಉಪಾಧೀಕ್ಷಕರು ಕೊಪ್ಪ ಉಪ ವಿಭಾಗರವರು ಪ್ರಕರಣದ ತನಿಖೆ ಯನ್ನು ಕೈಗೊಂಡಿರುತ್ತಾರೆ. ಈ ಸಂಬಂಧ ನಕ್ಸಲರು ಪರಾರಿಯಾಗಿ ಹೋಗಿದ್ದ ಸ್ಥಳದಲ್ಲಿ ದೊರೆತ ಮೂರು ಎಸ್ ಬಿ ಎಂ ಎಲ್ ಬಂದೂಕುಗಳು & ಅದಕ್ಕೆ ಸಂಬಂದಿಸಿದ ಮದ್ದುಗುಂಡುಗಳನ್ನು ವಶಪಡಿಸಿಕೊಂಡು ಮುಂದಿನ ಕಾನೂನುಪ್ರಕ್ರಿಯೆ ಕೈಗೊಳ್ಳಲಾಗಿದೆ.
ದೂರುದಾರರ ಖಚಿತ ಮಾಹಿತಿಯ ಮೇರೆಗೆ ಘಟನೆ ನಡೆದ ಸ್ಥಳವಾದ ಕಡೆಗುಂದಿ ಗ್ರಾಮದ ಸುಬ್ಬೆಗೌಡರ ಮನೆಯ ವ್ಯಾಪ್ತಿಯ ಪ್ರದೇಶದಲ್ಲಿ ಪರಾರಿಯಾಗಿರುವ ನಕ್ಸಲರಾದ ಮುಂಡಗಾರು ಲತಾ, ಜಯಣ್ಣ ಹಾಗೂ ಇನ್ನಿತರರ ಬಂಧನಕ್ಕಾಗಿ ANF ನಕ್ಸಲ್ ನಿಗ್ರಹದಳದ ವಿಶೇಷ ತಂಡದಿಂದ ತೀವ್ರ ಶೋಧಕಾರ್ಯ ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಾಚರಣೆಗೆ ಸ್ಥಳೀಯ ಪೊಲೀಸರು ಸಹಕಾರ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.



