oplus_262144
ಚಿಕ್ಕಮಗಳೂರು ತಾಲೂಕಿನ ಮಾರಿಕಟ್ಟೆ ಕಿರು ಅರಣ್ಯದಲ್ಲಿ ವಾಸ್ತವ್ಯ ಹೂಡಿರುವ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ರೈತ, ಬೆಳೆಗಾರರ ಬೆಳೆನಷ್ಟ ಉಂಟುಮಾಡಿದ್ದು, ಅರಣ್ಯ ಇಲಾಖೆ ಶೀಘ್ರದಲ್ಲಿ ಸ್ಥಳಪರಿಶೀಲನೆ ನಡೆಸಿ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗ ಕಾಫಿ ಹಣ್ಣು ಕೊಯ್ಲಿಗೆ ಬಂದಿದೆ. ಆದರೆ, ಕಾರ್ಮಿಕರು ಕಾಫಿತೋಟದೊಳಗೆ ಹೋಗಲು ಭಯಪಡುತ್ತಿದ್ದಾರೆ. ಈ ಮಧ್ಯೆ ಆನೆಗಳು ಕಾಫಿ ಗಿಡಗಳನ್ನು ಬುಡಸಮೇತ ಕಿತ್ತುಹಾಕಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿವೆ. ಕೆಸವಿನ ಮನೆ ಬೈರೇಗೌಡ ಎಂಬುವರ ತೋಟದಲ್ಲಿ ಒಂದೂವರೆ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಕಾಫಿ ಗಿಡಗಳು ನಾಶವಾಗಿವೆ ಎಂದು ಹೇಳಿದರು.
ಭತ್ತ, ಶುಂಠಿ, ಜೋಳ ಬೆಳೆ ನಾಶಮಾಡಿವೆ. ಇದೇ ರೀತಿ ದಿನೇಶ್, ಈರಯ್ಯ, ದ್ಯಾವಯ್ಯ, ಗುರುಮೂರ್ತಿ, ತಮ್ಮಣ್ಣಗೌಡ, ಮಂಜೇಗೌಡ, ಪುಟ್ಟೇಗೌಡ, ಅಶೋಕ, ನಾರಾಯಣಗೌಡ ಮತ್ತಿತರರ ತೋಟಗಳಲ್ಲೂ ಬೆಳೆ ನಾಶಮಾಡಿವೆ. ಅಲ್ಲಿ ಆಗಿರುವ ನಷ್ಟ ಅಂದಾಜಿಸಿದರೆ ಅರಣ್ಯ ಇಲಾಖೆ ಕೊಡುವ ಪರಿಹಾರ ಏನೇನೂ ಅಲ್ಲ. ಹೀಗಾಗಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನೈಜ ವರದಿಯನ್ನು ಆಧರಿಸಿ ವೈಜ್ಞಾನಿಕವಾದ ಆರ್ಥಿಕ ಪರಿಹಾರವನ್ನು ರೈತ, ಕಾಫಿ ಬೆಳೆಗಾರರಿಗೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕಳೆದ 25 ವರ್ಷದಿಂದ ಜಿಲ್ಲೆಯಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಮುಂದುವರಿದಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಕರ್ನಾಟಕ ಬೆಳೆಗಾರರ ಸಂಘ ಒಂದು ಸಭೆ ನಡೆಸಿ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಬೇಕು. ಇಲ್ಲಿಂದ ಸರ್ವ ಪಕ್ಷಗಳನ್ನೊಳಗೊಂಡ ಒಂದು ನಿಯೋಗ ತೆರಳಿ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರಿಗೆ ವರದಿ ನೀಡಬೇಕು. ಈ ವಿಚಾರ ಸದ್ಯದಲ್ಲೇ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಸುದೀರ್ಘ ಚರ್ಚೆಯಾಗುವಂತೆ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ದಲಿತ ದೌರ್ಜನ್ಯ ತಡೆ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಬೊಗಸೆ ಗ್ರಾಮದ ಮಲ್ಲೇಶ್ ಎಂಬುವರಿಗೆ ಒತ್ತುವರಿ ಸಂಬಂಧ ನೊಟೀಸ್ ಜಾರಿ ಮಾಡಿದ್ದು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಬೆಳೆಗಾರರ ಹಿತರಕ್ಷಣಾ ವೇದಿಕೆಯ ಹೊಲದಗದ್ದೆ ಗಿರೀಶ್, ದಸಂಸ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಛಲವಾದಿ ಸಂಘದ ಅಧ್ಯಕ್ಷ ರಘು, ಮಂಜಯ್ಯ ಇದ್ದರು.



