ಮಕ್ಕಳ ಭವಿಷ್ಯ ರೂಪಿಸಲು ಬುನಾದಿ ಹಾಕಿದ ಪೋಷಕರು, ಗುರುಗಳನ್ನು ಸ್ಮರಣೆ ಮಾಡಿಕೊಳ್ಳುವಂತಹ ಮನೋಭಾವ ಬೆಳೆಸಿಕೊಂಡವರಿಂದ ಈ ದೇಶ ಉನ್ನತ ಸ್ಥಾನದಲ್ಲಿ ಬೆಳೆಯಲು ಹಾಗೂ ಸಮಾಜ ಸರಿ ದಾರಿಯಲ್ಲಿ ಸಾಗಲು ಸಾಧ್ಯವಿದೆ ಎಂದು ಶೃಂಗೇರಿ ಆದಿಚುಂಚನಗಿರಿ ಸಂಸ್ಥಾನ ಶಾಖಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಬಿಜಿಎಸ್ ವಿಎಸ್ ಶಾಲೆ, ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಗುರುಗಳು ಹಾಗೂ ಸ್ವಾಮೀಜಿಗಳು ನುಡಿಯುವ ಭವಿಷ್ಯ ಕೇಳಲು ಜನರು ತಾ ಮುಂದು ಎಂಬಂತೆ ಬರುತ್ತಾರೆ. ಜ್ಯೋತಿಷ್ಯ ನಮಗೆ ಬೇಕಾಗಿಲ್ಲ. ಭವಿಷ್ಯ ರೂಪಿಸಿಕೊಳ್ಳುವುದು ಅವರವರ ಸಾಮರ್ಥ್ಯ ಜತೆಗೆ ಬೆಂಬಲಿಸುವ ಪೋಷಕರು ಹಾಗೂ ಗುರುಗಳಿಂದ ಮಾತ್ರ ಸಾಧ್ಯ. ಶಿಕ್ಷಣದಲ್ಲಿ ಭವಿಷ್ಯವಿದೆ ಎಂದು ಅರಿತಿದ್ದ ಪರಮಪೂಜ್ಯ ಬಾಲ ಗಂಗಾಧರ ಸ್ವಾಮೀಜಿ ಅವರು ಭವಿಷ್ಯ ನುಡಿಯುತ್ತಿರಲಿಲ್ಲ. ಎಲ್ಲಾ ವರ್ಗದ ಬಡವರು, ದೀನ ದಲಿತರ ಮಕ್ಕಳಿಗೆ ಶಿಕ್ಷಣ ಕೊಡುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ಕಾರ್ಯ ಮಾಡಿದರು. ಹಾಗಾಗಿ ಮಕ್ಕಳ ಭವಿಷ್ಯಕ್ಕಾಗಿ ದುಡಿಯುವಂತಹ ಮಹಾನ್ ಕಾರ್ಯ ಬೇರೊಂದಿಲ್ಲ ಎಂದು ಹೇಳಿದರು.
ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯೆ ಜತೆಗೆ ಸಂಸ್ಕಾರ ಕಲಿಸಿಕೊಡುವ ಕೆಲಸವಾಗಬೇಕು. ಅಗತ್ಯ ಸಂದರ್ಭದಲ್ಲಿ ಮಾತ್ರ ಮೊಬೈಲ್ ಬಳಕೆಗೆ ಅನುವು ಮಾಡಿಕೊಡಬೇಕು. ಎಂಜಿನಿಯರ್, ಡಾಕ್ಟರ್ ಆಗುವುದು ಮಾತ್ರವಲ್ಲ. ಈ ಸಮಾಜ ಒಳ್ಳೆಯ ದಿಕ್ಕಿನಲ್ಲಿ ಕೊಂಡೊಯ್ಯವ ಜವಾಬ್ದಾರಿ ಕೂಡ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಕ್ರೀಡೆ, ಕಲೆ ಸೇರಿದಂತೆ ನಾನಾ ರೀತಿಯ ಪ್ರತಿಭೆಗಳು ಮಕ್ಕಳಲ್ಲಿ ಅಡಗಿರುತ್ತದೆ. ಅದನ್ನು ಎಳೆ ವಯಸ್ಸಿನಲ್ಲಿ ಮೊಟಕು ಹಾಕದೇ ಪ್ರತಿಭೆಯನ್ನು ಪತ್ತೆ ಮಾಡಿ ಅನಾವರಣಗೊಳಿಸುವ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕೆಂದು ಹೇಳಿದರು.
ಶಿಕ್ಷಣ ತಜ್ಞ ದುಗ್ಗಪ್ಪಗೌಡ, ಸಾಹಿತಿ ಹಳೆಕೋಟೆ ರಮೇಶ್, ಎಂ.ಎಲ್.ಸುಂದರೇಶ್ವರ್, ಡಾ.ಅನಂತ ಪದ್ಮನಾಭ, ಎಚ್.ಜಿ.ಸುರೇಂದ್ರ, ಎಂ.ಪಿ.ಮನು, ಎಂ.ಡಿ. ಜಯಪಾಲ್, ಕೆ.ಎಚ್.ವೆಂಕಟೇಶ್, ಬಿಜಿಎಸ್ ವಿಎಸ್ ಕಾಲೇಜು ಪ್ರಾಶುಪಾಲ ಎಂ.ಆರ್.ಸಂದೇಶ್, ಶಾಲೆ ಪ್ರಾಂಶುಪಾಲ ರಮೇಶ್ ಕುಮಾರ್, ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ವಿ.ಎಸ್. ಟ್ರಸ್ಟ್ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಟ್ರಸ್ಟ್ ಸದಸ್ಯರಾದ ಕೆ.ಹೆಚ್. ವೆಂಕಟೇಶ್ ಕೊಲ್ಲಿಬೈಲ್ ಇವರ ಕಟುಂಬ ರೂ. ಒಂದು ಲಕ್ಷ ಹಣವನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದು, ಅದರಿಂದ ಬರುವ ಬಡ್ಡಿಯಿಂದ ಪ್ರತಿ ವರ್ಷ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ವಿನಿಯೋಗಿಲಾಗುತ್ತದೆ.




