ಮದ್ಯದಂಗಡಿಯಲ್ಲಿ ಹಣ ನೀಡುವ ವಿಚಾರವಾಗಿ ಕ್ಯಾಷಿಯರ್ ಮತ್ತು ಯುವಕರ ನಡುವೆ ಗಲಾಟೆ ನಡೆದು ಹೊಡೆದಾಡಿದ ಘಟನೆ ನಡೆದಿದೆ.
ಚಿಕಮಗಳೂರು ನಗರದ ದೀಪಾ ಬಾರ್ ನಲ್ಲಿ ಸಪ್ಲೇಯರ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಮಣಿಕಂಠ ಎಂಬಾತ ತನ್ನ ಪಟಾಲಂ ನೊಂದಿಗೆ ಬಾರ್ ಗೆ ಕುಡಿಯಲು ಬಂದವನು ಸಪ್ಲೇಯರ್ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಇದಾದ ನಂತರ ದೀಪಾ ಬಾರ್ ಮಾಲೀಕ ರಾಕಿ ಎಂಬಾತ ತನ್ನ ಪಟಾಲಂ ಕಟ್ಟಿಕೊಂಡು ಹತ್ತಾರು ಬೈಕ್ ಗಳಲ್ಲಿ ಮಣಿಕಂಠನ ಮನೆಯ ಬಳಿ ತೆರಳಿ ಗಲಾಟೆ ನಡೆಸಿದ್ದಾನೆ. ಇದರಿಂದ ಚಿಕ್ಕಮಗಳೂರು ನಗರದ ಆಶ್ರಯ ಯೋಜನೆ ಬಡಾವಣೆಯಲ್ಲಿ ತೀವ್ರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ರೊಚ್ಚಿಗೆದ್ದ ಯುವಕರ ತಂಡ ಕೈಯಲ್ಲಿ ದೊಣ್ಣೆ ಹಿಡಿದು ಓಡಾಡಿದ್ದಾರೆ. ಬಡಾವಣೆಯಲ್ಲಿ ಆತಂಕದ ವಾತವರಣ ಸೃಷ್ಟಿಯಾಗಿತ್ತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, 35 ಜನರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೆಲವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.




