ವೈದ್ಯನಾಗಿದ್ದು ಪತ್ನಿಗೆ ಮಾನಸಿಕ ಕಿರುಕುಳ ನೀಡಿ ವರ್ಷಗಟ್ಟಲೆ ಗೃಹ ಬಂಧನದಲ್ಲಿರಿಸಿದ ಮನ ಕಲಕುವ ವಿಚಿತ್ರ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದು, ಅಸ್ವಸ್ಥ ಮಹಿಳೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವೈದ್ಯ ಪತಿಯ ವಿರುದ್ಧ ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಈಕೆ ಹೆಸ್ರು ವಿನುತಾ ರಾಣಿ. ವಯಸ್ಸು ಅಂದಾಜು 45 ವರ್ಷ. ಚಿಕ್ಕಮಗಳೂರು ನಗರದ ದೋಣಿಕಣ ನಿವಾಸಿ. 22 ವರ್ಷದ ಹಿಂದೆ ಡಾ.ರವಿಕುಮಾರ್ ಜೊತೆ ಮದುವೆಯಾಗಿದ್ದು, ಎಂಬಿಬಿಎಸ್ ಓದುತ್ತಿರೋ ಮಗನೂ ಇದ್ದಾನೆ. ಆದ್ರೆ, 4 ವರ್ಷದಿಂದ ಪತ್ನಿಗೆ ಮಾನಸಿಕ ಕಿರುಕುಳ ನೀಡ್ತಿರೋ ಪತಿ ಈಕೆಯನ್ನು ಗೃಹಬಂಧನಲ್ಲಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರು ನಗರದ ದೋಣಿಕಣ ಸಮೀಪದ ಮನೆಯಲ್ಲಿ ವೈದ್ಯ ತನ್ನ ಪತ್ನಿ ವಿನುತಾರಾಣಿಗೆ ಚಿತ್ರಹಿಂಸೆ ನೀಡಿ ಕಿರುಕುಳ ಕೊಡುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಹುಚ್ಚಿ ಎಂದು ಬಿಂಬಿಸಿ ಮಾನಸಿಕ ಜೊತೆಯಲ್ಲಿ ದೈಹಿಕ ಕಿರುಕುಳವನ್ನು ನೀಡಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಮಹಿಳೆಯ ಮಗನಿಗೂ ಕೂಡ ತಾಯಿಯ ಮೇಲೆ ಜಿಗುಪ್ಸೆ ಬರುವಂತೆ ಮಾಡಿ ತಾಯಿಯಿಂದ ಮಗನನ್ನು ದೂರ ಇರುವಂತೆ ಮಾಡಿರೋ ಆರೋಪವೂ ಕೇಳಿ ಬಂದಿದೆ. ಬುಧವಾರ ಬೆಳಗ್ಗೆ ವಿನುತಾ ರಾಣಿಯ ಸಹೋದರ ವಾಗೀಶ್ ಕುಮಾರ್, ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಮನೆಯ ಬಾಗಿಲು ಒಡೆದು ಗೃಹಬಂಧನದಲ್ಲಿದ್ದ ಮಹಿಳೆಯನ್ನು ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಮೊಬೈಲ್ ಕೂಡ ಬಳಸದಂತೆ, ಸಾರ್ವಜನಿಕರ ಸಂಪರ್ಕ ಸಂಪರ್ಕವೂ ಸಿಗದಂತೆ ಮನೆಯಲ್ಲಿಯೇ ಕೂಡಿಹಾಕಿ, ಸಂಬಂಧಿಕರ ಸಂಪರ್ಕವೂ ಸಿಗದಂತೆ ಮಾಡಿ ನೆರೆಹೊರೆಯವರು ಜೊತೆ ಬೆರೆಯದಂತೆ ಮಾಡಿರುವ ಆರೋಪ ವೈದ್ಯನ ಮೇಲೆ ಕೇಳಿಬಂದಿದೆ.
ಗೃಹ ಬಂಧನದಲಿದ್ದ ಮಹಿಳೆ ಹೊರ ಬರುತ್ತಿದ್ದಂತೆ ಅಕ್ಕ ಪಕ್ಕದ ಮನೆಯ ನಿವಾಸಿಗಳು ಹಲವು ದಿನಗಳ ಬಳಿಕ ಆಕೆಯ ಪರಿಸ್ಥಿತಿಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತೀವ್ರ ಬಳಲಿರುವ ದೇಹ ಹಾಗೂ ಊಟವಿಲ್ಲದೆ ಆರೋಗ್ಯ ಸಮಸ್ಯೆ ಉಂಟಾಗಿರುವ ಮಹಿಳೆಯ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಪರಿಸ್ಥಿತಿಯನ್ನು ತಿಳಿದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಡಿಎಚ್ಒ ಹಾಗೂ ಮಹಿಳಾ ಠಾಣೆಗೆ ಸೂಚನೆ ನೀಡಿ ವಿನುತಾರಾಣಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.



