ಮೂಡಿಗೆರೆ ತಾಲೂಕಿನ ಪಟ್ಟದೂರು ಗ್ರಾಮದಲ್ಲಿರುವ ಡಾಕ್ಟರ್ ಹೆಡಗೇವಾರ್ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಸಂಘದ ಹಿರಿಯ ಸದಸ್ಯ ಪ್ರಮೋದ್ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ವಂದೇ ಮಾತರಂ ಯುವಕ ಸಂಘದ ರಾಜ್ಯ ಅಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿಯವರು ಮಾತನಾಡಿ ; ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಹಾಗೆ ಯೋಗ ಎಂದರೆ ಮನಸ್ಸು ಮತ್ತು ಬುದ್ಧಿಯನ್ನು ಒಂದು ಕಡೆ ಸೇರಿಸುವುದು ಅಥವಾ ಕೇಂದ್ರೀಕರಿಸುವುದು. ಈ ಪ್ರಕ್ರಿಯೆಯನ್ನು ನಾವು ಕ್ರೀಡೆಯಲ್ಲಿ ನೋಡುತ್ತೇವೆ. ಕ್ರೀಡಾಪಟು ಕ್ರೀಡೆಯನ್ನು ಆಡುವಾಗ ತನ್ನ ಮನಸ್ಸು ಮತ್ತು ಬುದ್ಧಿಯನ್ನು ಸಂಪೂರ್ಣವಾಗಿ ಆ ಕ್ರೀಡೆ ಕಡೆಗೆ ಕೇಂದ್ರೀಕರಿಸಿರುತ್ತಾನೆ. ಆ ಮನಸ್ಸು ಮತ್ತು ಬುದ್ಧಿಯನ್ನು ಕೇಂದ್ರಿಕರಿಸಿ ಒಂದು ರೇಖೆಗೆ ತರೋದಕ್ಕೆ ಯೋಗ ಎನ್ನುತ್ತಾರೆ. ಹಾಗಾಗಿ ನಮಗೆ ಅರಿವಿಲ್ಲದೆ ಕ್ರೀಡೆಯನ್ನು ಆಡುವಾಗ ನಮ್ಮ ಮನಸ್ಸು ಮತ್ತು ಬುದ್ಧಿಯು ಯೋಗ ಸ್ಥಿತಿಗೆ ಹೋಗುತ್ತದೆ. ಇದರಿಂದ ನಮ್ಮ ಮಾನಸಿಕ ಬೌದ್ಧಿಕ ದೈಹಿಕ ಆರೋಗ್ಯವು ವೃದ್ಧಿಯಾಗುತ್ತದೆ ಎಂದು ಹೇಳಿದರು. ವಂದೇ ಮಾತರಂ ಯುವಕ ಸಂಘವು ಒಟ್ಟು 14 ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ಅನ್ನು ಹೊಂದಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದು ಹೇಳಿದರು.
ಮೊದಲನೇ ಬಹುಮಾನವನ್ನು ರಾಯಲ್ಸ್ ತಂಡ ಬಣಕಲ್ ಪಡೆದುಕೊಂಡರೆ ಎರಡನೇ ಬಹುಮಾನ ಹಳೆಕೋಟೆ ತಂಡದವರು ಪಡೆದುಕೊಂಡರು. ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ಮೂರನೇ ಬಹುಮಾನವನ್ನು ಪಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಘು, ಸಂಪತ್,ಮಧು ಕುಮಾರ್. ಪಟ್ಟದೂರು ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಅರುಣ್ ಚೆಂಗಪ್ಪ, ಶಂಕರ್, ಸಂಜಯ್, ಅಶ್ವತ್ , ಹೊನ್ನೆಮೆಕ್ಕಿ ಮಂಜುನಾಥ್, ಶ್ರೀಕಂಠ ದೇವರಾಜ್ ಮತ್ತಿತರು ಇದ್ದರು.


