ಸಮಾಜಸೇವೆಯೆ ದೇವರ ಸೇವೆ. ಸಣ್ಣಪುಟ್ಟ ಸೇವಾ ಕಾರ್ಯದಿಂದ ಅಪಾರ ಸಂತೋಷ ಉಂಟಾಗುತ್ತದೆ ಎಂದು ಚಿಕ್ಕಮಗಳೂರು ಮಹಿಳಾಜಾಗೃತಿ ಸಂಘದ ಅಧ್ಯಕ್ಷ ಸುಲೋಚನಾಶೇಖರ್ ಅಭಿಪ್ರಾಯಿಸಿದರು.
ಮಹಿಳಾ ಜಾಗೃತಿ ಸಂಘದ ಸರ್ವಸದಸ್ಯರ ಸಭೆ ಹಾಗೂ 38ನೆಯ ವಾರ್ಷಿಕೋತ್ಸವದ ಅಧ್ಯಕ್ಷತೆವಹಿಸಿ ನಗರದ ಎಂಎಲ್ವಿ ರೋಟರಿ ಸಭಾಂಗಣದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಮನೆಯಲ್ಲಿ ಕುಟುಂಬವನ್ನು ನಿರ್ವಹಿಸುವ ಮಹತ್ವದ ಜವಾಬ್ದಾರಿ ಹೊತ್ತಿರುತ್ತಾರೆ. ಬಿಡುವಿನ ವೇಳೆಯಲ್ಲಿ ಇಂತಹ ಸಂಘದ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಸಂತೋಷ ಹಂಚಿಕೊಳ್ಳುವುದರ ಜೊತೆಗೆ ಒಂದಷ್ಟು ಸೇವಾಕಾರ್ಯವನ್ನು ಮಾಡಿದಾಗ ಆತ್ಮತೃಪ್ತಿ ಸಿಗುತ್ತದೆ. ಆರೋಗ್ಯ, ಶಿಕ್ಷಣ, ಕ್ರೀಡಾ ಕ್ಷೇತ್ರಗಳಲ್ಲಿ ಸೇವೆಗೆ ಹೆಚ್ಚಿನ ಅವಕಾಶವಿದೆ. ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದರು.
ನಾವು ನಮ್ಮ ಸುಖ-ಸಂತೋಷಕ್ಕಾಗಿ, ಪ್ರವಾಸ-ಮನರಂಜನೆಗಾಗಿ ಬಹಳಷ್ಟು ಖರ್ಚು ಮಾಡುತ್ತೇವೆ. ಅದರಲ್ಲಿ ಸಣ್ಣ ಮೊತ್ತವನ್ನಾದರೂ ದೀನರು, ದುರ್ಬಲರು, ಅಶಕ್ತರಿಗೆ ವಿನಿಯೋಗಿಸಬೇಕು. ಶಾಲಾಮಕ್ಕಳಿಗೆ ಚಪ್ಪಲಿ, ಸಾಕ್ಸ್, ಬಟ್ಟೆ, ಪುಸ್ತಕ, ಕೈಚೀಲ, ಹಣ್ಣು, ಹಾಲು ಹೀಗೆ ನಮ್ಮ ಇತಿಮಿತಿಯಲ್ಲಾದರೂ ಸಣ್ಣಪುಟ್ಟ ಕೊಡುಗೆ ನೀಡುತ್ತಿರಬೇಕು. ಅಗತ್ಯವಿರುವವರಿಗೆ ನಮ್ಮಿಂದಾಗುವ ಸಣ್ಣ ಸಹಾಯವನ್ನಾದರೂ ಮಾಡುತ್ತಿದ್ದರೆ ಬದುಕು ಸಾರ್ಥಕವಾಗುತ್ತದೆ ಎಂದರು.
ಮಹಿಳೆಯರನ್ನು ಸಂಘಟಿಸಿ 1983ರಲ್ಲಿ ಗೌರಮ್ಮಬಸವೇಗೌಡರ ನೇತೃತ್ವದಲ್ಲಿ ಜಾಗೃತಿ ಸಂಘ ಪ್ರಾರಂಭಿಸಿದೆವು. ಸುಮಾರು500ಮಹಿಳೆಯರನ್ನು ಸದಸ್ಯರಾಗಿನೊಂದಾಯಿಸಿ, ತಿಂಗಳಿಗೊಮ್ಮೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಮೂರು ತಿಂಗಳಿಗೊಮ್ಮೆ ಜನೋಪಯೋಗಿ ಸೇವಾಕಾರ್ಯವನ್ನು ನಿರ್ವಹಿಸಲಾಗುತ್ತಿತ್ತು. ಕೊರೋನಾ ಸಂದರ್ಭದಲ್ಲಿ ಚಟುವಟಿಕೆಗಳು ಕುಂಠಿತವಾಗಿದ್ದು ಈಗ ಸುಲಲಿತವಾಗಿ ಮುನ್ನಡೆಯುತ್ತಿದೆ ಎಂದ ಸುಲೋಚನಾಶೇಖರ್, ಸದಸ್ಯರೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡಿದ್ದೇ ಆದರೆ ಇನ್ನಷ್ಟು ಕಾರ್ಯವಿಸ್ತಾರ ಆಗುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿದ ಸಂಸ್ಥಾಪಕ ಕಾರ್ಯದರ್ಶಿ ಕಾತ್ಯಾಯಿನಿಚಂದ್ರಶೇಖರ್ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದರ ಜೊತೆಗೆ ಆತ್ಮವಿಶ್ವಾಸತುಂಬಿ ಸಮಾಜದಲ್ಲಿ ಗುರುತಿಸಿಕೊಳ್ಳಲು ನೆರವು ನೀಡುವ ಹಿನ್ನಲೆಯಲ್ಲಿ ಗೌರಮ್ಮಬಸವೇಗೌಡರ ಜೊತೆ ಸೇರಿ ಪ್ರಾರಂಭಿಸಿದ ದಿನಗಳನ್ನು ನೆನಪಿಸಿಕೊಂಡು ಹಣ ಸಂಗ್ರಣೆಗಾಗಿ ಬೆಂಗಳೂರಿನಲ್ಲಿ ಬಣ್ಣ ಹಚ್ಚಿಕೊಂಡಿದ್ದನ್ನು ಸ್ಮರಿಸಿದರು.
ಹಳೇಬೇರು ಹೊಸ ಚಿಗುರು ಮರಸೊಬಗು ಎನ್ನುವಂತೆ ಎಲ್ಲ ವಯೋಮಾನದ ಮಹಿಳೆಯರು ಇಲ್ಲಿ ಸಂಘಟಿತರಾಗಿರುವುದು ಹರ್ಷದ ಸಂಗತಿ. ಯಾವುದೇ ತಾರತಮ್ಯವಿಲ್ಲದೆ ಒಟ್ಟಾಗಿ ಕಲೆತು ಸಂತೋಷ ಪಡುವುದರ ಜೊತೆಗೆ ಒಂದಷ್ಟು ನಿಸ್ವಾರ್ಥ ಸೇವೆ ಸಲ್ಲಿಸುವ ಅವಕಾಶ ಇಲ್ಲಿದೆ ಎಂದರು.
ನಿರ್ದೇಶಕಿ ಶೈಲಾಚಲುವಯ್ಯ ಪ್ರಾಸ್ತಾವಿಸಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸರಳಸಮೂಹಿಕ ವಿವಾಹ, ಗುಜರಾತ್ ಭೂಕಂಪ, ಒರಿಸ್ಸಾದ ಪ್ರವಾಹ, ಬರ, ಕಾರ್ಗಿಲ್ಯುದ್ಧ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ನೆರವು ನೀಡುವಲ್ಲಿ ಸಂಘ ಮುಂದಾಗಿದ್ದು ಹೆಮ್ಮೆಯ ಸಂಗತಿ. ಚಿಕ್ಕಮಗಳೂರು ಸ್ವಚ್ಛತೆಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಾಧಕ ಮಹಿಳೆಯರಿಗೆ ‘ಮಹಿಳಾರತ್ನ’ ಪುರಸ್ಕಾರ ನೀಡುವ ಮೂಲಕ ಒಂದಷ್ಟು ಚಟುವಟಿಕೆಗಳ ಮೂಲಕ ಸಂಘ ಗಮನಸೆಳೆದಿದೆ ಎಂದರು.
ಪ್ರತಿವರ್ಷದಂತೆ ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕಪಡೆದ ಟಿ.ಎಂ.ಎಸ್.ನ ಆರುವಿದ್ಯಾರ್ಥಿಗಳಿಗೆ ತಲಾ 1,000ರೂ.ಪ್ರೋತ್ಸಾಹಧನ ನೀಡಲಾಯಿತು. ಅದೃಷ್ಟಸಿರಿ, ಅದೃಷ್ಟರಾಣಿ, ಅದೃಷ್ಟವನಿತೆ, ಅದೃಷ್ಟಶಾಲಿಯನ್ನು ಆರಿಸಿ ಗೌರವಿಸಲಾಯಿತು. ಸಾಂಸ್ಕøತಿ ಕಾರ್ಯಕ್ರಮ ಆಕರ್ಷವಾಗಿತ್ತು.
ನಿರ್ದೇಶಕರುಗಳಾದ ಡಿ.ಎಸ್.ಮಮತಾ ಸ್ವಾಗತಿಸಿ, ಯಶೋಧಶಿವಪ್ಪ ಪ್ರಾರ್ಥಿಸಿ, ಖಜಾಂಚಿ ಸುಲೋಚನಮ್ಮಶ್ರೀನಿವಾಸ್ ವಂದಿಸಿ, ಸಹಕಾರ್ಯದರ್ಶಿ ಗೀತಾಸುಂದ್ರೇಶ್ ನಿರೂಪಿಸಿದರು. ಗುಣರತ್ನನಂದೀಶ್ ಮತ್ತು ಭಾರತಿಶಿವರುದ್ರಪ್ಪ ನಾಡಗೀತೆ ಹಾಡಿದರು.
ಉಪಾಧ್ಯಕ್ಷೆ ಕೃಷ್ಣವೇಣಿಗೋಪಾಲ್, ನಿರ್ದೇಶಕರುಗಳಾದ ಪಾರ್ವತಿ, ಗೀತಾಮೂರ್ತಿ, ಕವಿತಾಗೋಪಾಲ, ಸಿ.ಎಂ.ಹೇಮಾ, ರೇಣುಕಾ, ಯಮುನಾಸಿ.ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು.
ಗುರುವಾರ ವಾರ್ಷಿಕ ಕ್ರೀಡಾಕೂಟ ನಡೆಸಲಾಯಿತು. ಸರ್ವಸದಸುರ ಸಭೆಯಲ್ಲಿ ನಿರ್ದೇಶಕಿ ಪಾರ್ವತಿ ಬಸವರಾಜು ಆಹ್ವಾನ ಪತ್ರಿಕೆ ಓದಿದರು. ಸಹಕಾರ್ಯದರ್ಶಿ ಗೀತಾ ಸುಂದ್ರೇಶ್ ಲೆಕ್ಕಪತ್ರ, ಗುಣರತ್ನ ನಂದೀಶ್ ವಾರ್ಷಿಕವರದಿ ಮಂಡಿಸಿದರು. ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಸುಲೋಚನಾ ಶೇಖರ್ ಬಹುಮಾನ ವಿತರಿಸಿದರು.




