ಕಳಸ ಪೊಲೀಸ್ ಠಾಣೆಯ ಠಾಣಾಧಿಕಾರಿ ನಿತ್ಯಾನಂದ ಮೇಲೆ ಅವರ ಪತ್ನಿ ಅಮಿತಾ ಅವರು ಗುರುತರ ಆರೋಪ ಮಾಡಿ ದೂರು ನೀಡಿದ್ದರು ಈ ಬಗ್ಗೆ ಕಳಸ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಶುಕ್ರವಾರ ನಿತ್ಯಾನಂದ ಅವರ ಪತ್ನಿ ದೂರು ದಾಖಲಿಸಿದ ಬೆನ್ನಲ್ಲೇ ಇವತ್ತು ಶನಿವಾರ ಕಳಸ ಪಿಎಸ್ಐ ನಿತ್ಯಾನಂದ ಕೂಡ ತನ್ನ ಪತ್ನಿ ಅಮಿತಾ ಅವರ ಮೇಲೆ ಪ್ರತಿದೂರು ದಾಖಲಿಸಿದ್ದಾರೆ.
ನಿತ್ಯಾನಂದ ಅವರು ತಮ್ಮ ಪತ್ನಿಯ ವಿರುದ್ಧ ನೀಡಿರುವ ದೂರು ಏನೆಂದರೆ :
ನಾನು ಸುಮಾರು 11 ವರ್ಷಗಳ ಹಿಂದೆ ಮದುವೆಯಾಗಿದ್ದು ಒಬ್ಬ ಮಗನಿರುತ್ತಾನೆ. ನನ್ನ ಪತ್ನಿ ಅಮಿತಾ ಹಾಗೂ ಮಗ ಉಡುಪಿಯಲ್ಲಿ ವಾಸವಿದ್ದು, ಸ್ವಂತ ಮನೆಯನ್ನು ಹೊಂದಿರುತ್ತಾರೆ. ನನಗೆ ಹಾಗೂ ನನ್ನ ಪತ್ನಿಯ ನಡುವೆ ಕೌಟುಂಬಿಕವಾಗಿ ಹೊಂದಾಣಿಕೆ ಇಲ್ಲದ ಕಾರಣ ಹೇಗೋ ಮಗನಿಗಾಗಿ ಇಲ್ಲಿಯವರೆಗೆ ಜೀವನ ಮಾಡಿಕೊಂಡು ಬಂದಿರುತ್ತೇನೆ.
ನನ್ನ ಪತ್ನಿಗೆ ವಿವಾಹವೇತರ ಅಕ್ರಮ ಸಂಬಂಧವಿದ್ದು ಹಾಗೂ ನಾನು ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ನನ್ನ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಸುಳ್ಳು ಆರೋಪ ಮಾಡಿ ದೂರು ನೀಡಿರುತ್ತಾಳೆ. ಇದರಿಂದ ಬೇಸತ್ತು ನಾನು 2024 ನೇ ಸಾಲಿನಲ್ಲಿ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಸರ್ಜಿ ಸಲ್ಲಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿರುತ್ತದೆ. ಅದರಂತೆ 17/01/2025 ರಂದು ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ನಾನು ರಜೆಯ ಮೇಲೆ ತೆರಳಿ ನನ್ನ ವಕೀಲರ ಸಮಕ್ಷಮ ನ್ಯಾಯಾಲಯಕ್ಕೆ ಹಾಜರಾಗಿ ದಾಖಲಾತಿಗಳನ್ನು ನೀಡಿ ಬಂದಿರುತ್ತೇನೆ. ಈ ದಿನ ನನ್ನ ಪತ್ನಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವುದಿಲ್ಲ. ನಾನು ನ್ಯಾಯಾಲಯದಿಂದ ಹೊರಟು ಬರುತ್ತಿರುವಾಗ ನನಗೆ ನನ್ನ ಪತ್ನಿಯು ಹಲವು ಬಾರಿ ದೂರವಾಣಿ ಕರೆ ಮಾಡಿ ನಿನ್ನನ್ನು ಇಲಾಖೆಯಿಂದ ತೆಗಿಸುತ್ತೇನೆ ಹಾಗೂ ನಿನ್ನ ಕಥೆ ಮುಗಿಸುತ್ತೇನೆಂದು ಬೆದರಿಕೆ ಹಾಕಿರುತ್ತಾಳೆ. ಅದರಂತೆ ನಾನು ವಾಪಾಸು ಬಂದು ನನ್ನ ಪೊಲೀಸ್ ವಸತಿ ಗೃಹದಲ್ಲಿರುವಾಗ ರಾತ್ರಿ ಸುಮಾರು 08:30 ಗಂಟೆಗೆ ನನ್ನ ಮನೆಯ ಬಾಗಿಲು, ಗೋಡೆ ಹಾಗೂ ಕಿಟಕಿಗೇ ಯಾರೋ ಕಲ್ಲುಗಳಿಂದ ಹೊಡೆಯುತ್ತಿದ್ದ ಶಬ್ದ ಕೇಳುತ್ತಿದ್ದು, ಆ ಸಮಯ ನಾನು ಕಿಟಕಿಯ ಮರೆಯಿಂದ ಇಣಿಕಿ ಯಾರು ನೀವು ಎಂದು ಕೇಳಿದಾಗ ನನ್ನ ಮನೆಯ ಕಿಟಕಿಯ ಗಾಜಿಗೆ ಕಲ್ಲಿನಲ್ಲಿ ಜೋರಾಗಿ ಹೊಡೆದಿದ್ದು, ಆ ಸಮಯ ಕಿಟಕಿಯ ಗಾಜುಗಳು ಒಡೆದು ಹೋಗಿ, ಮನೆಯ ಒಳಗೆ ಚೆಲ್ಲಾಪಿಲ್ಲಿಯಾಗಿ ಗಾಜಿನ ಚೂರುಗಳು ಮನೆಯ ಒಳಗೆ ಬಿದ್ದಿರುತ್ತವೆ.
ಆ ಸಮಯ ಹೊಡೆದಿರುವುದು ಯಾರೆಂಬುದಾಗಿ ಒಡೆದ ಗಾಜಿನ ಕಿಟಕಿಯಿಂದ ಇಣುಕಿ ನೋಡಿದಾಗ ನನ್ನ ಪತ್ನಿ ಅಮಿತಾ ಹಾಗೂ ಇನ್ನಿಬ್ಬರು ಯಾರೋ ವ್ಯಕ್ತಿಗಳು ಕೈಯಲ್ಲಿ ಕಲ್ಲು ದೊಣ್ಣೆ ಹಿಡಿದುಕೊಂಡು ಇರುವುದು ಕಂಡು ಬಂದಿದ್ದು ನನ್ನನ್ನು ಕಂಡು ಆಕೆಯೊಂದಿಗೆ ಬಂದವರು ಯಾವುದೋ ಕಾರು ಅಥವಾ ಇತರ ಯಾವುದೋ ವಾಹನದಲ್ಲಿ ಹೋದ ರೀತಿ ಶಬ್ದ ಕೇಳಿರುತ್ತದೆ. ಆ ಸಮಯ ನಾನು ಗಾಬರಿಗೊಂಡು ಠಾಣೆಯ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಗೂ ನನ್ನ ತಂಗಿ ಮೇನಕಾರವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಬರಲು ತಿಳಿಸಿರುತ್ತೇನೆ. ಅಷ್ಟರಲ್ಲಿ ನನ್ನ ತಂಗಿ ಮೇನಕಾ, ತಂಗಿಯ ಗಂಡ ಚಂದ್ರಕಾಂತ್ ಕೊಠಾರಿ ಸಿಬ್ಬಂದಿಯವರು ಬಂದಿದ್ದು, ಆ ಸಮಯ ನನ್ನ ಪತ್ನಿಯು ನನ್ನ ಗಂಡ ನನಗೆ ಹೊಡೆದು ಗಾಯಗೊಳಿಸಿದ್ದು, ನನ್ನನ್ನು ಕಾಪಾಡಿ ಎಂದು ಜೋರಾಗಿ ಅಳುತ್ತಾ ಪೊಲೀಸ್ ವಸತಿ ಗೃಹದ ಸುತ್ತಾ ಮುತ್ತಾ ಕಿರುಚಾಡುತ್ತಾ ನನ್ನನ್ನು ಕಾಪಾಡಿ ಎಂದು ಸಾರ್ವಜನಿಕರನ್ನು ಕರೆಸಿಕೊಳ್ಳೂವಂತೆ ಮಾಡಿದ್ದಳು.
ಅಷ್ಟರಲ್ಲೆ ನಾನು ಸಿಬ್ಬಂದಿಗಳ ಸಮಕ್ಷಮ ಬಾಗಿಲು ತೆಗೆದಾಗ ನನ್ನ ಪತ್ನಿಯು ನನ್ನ ಕೊರಳ ಪಟ್ಟಿಗೆ ಕೈಹಾಕಿ ಅಲ್ಲೆ ಇದ್ದ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದು, ಆ ಸಮಯ ಸಿಬ್ಬಂದಿಗಳು ತಡೆದು ಬುದ್ದಿವಾದ ಹೇಳಿರುತ್ತಾರೆ.
ನಂತರ ನನ್ನ ಪತ್ನಿಯನ್ನು ಸಿಬ್ಬಂದಿಗಳು ಸಂತೈಸಿ ಠಾಣೆಗೆ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ನಾನು ಪೊಲೀಸ್ ಅಧೀಕ್ಷಕರು ಹಾಗೂ ಎಲ್ಲ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿರುತ್ತೇನೆ.
ನಂತರ ಠಾಣೆಗೆ ನನ್ನ ಪತ್ನಿಯು ಮಹಮ್ಮದ್ ರಫೀಕ್ ನನ್ನು ಕರೆಯಿಸಿ ಆತನೊಂದಿಗೆ ಎಲ್ಲವನ್ನು ತಿಳಿಸುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ನನ್ನ ಪತ್ನಿಯು ನಾನು ಪೊಲೀಸ್ ವಸತಿಗೃಹದಲ್ಲಿ ಒಬ್ಬನೇ ಇರುವುದನ್ನು ಫಾಲೋ ಮಾಡಿಕೊಂಡು ಬಂದು ನನ್ನನ್ನು ಕೊಲ್ಲುವ ಉದ್ದೇಶದಿಂದ ಮಹಮ್ಮದ್ ರಫೀಕ್ ಹಾಗೂ ಇತರರೊಂದಿಗೆ ಬಂದು ಹಲ್ಲೆ ಮಾಡಲು ಪ್ರಯತ್ನಿಸಿ ಕಲ್ಲು ಹಾಗೂ ಮಾರಕ ಆಯುಧಗಳಿಂದ ಮನೆಯ ಕಿಟಕಿಯ ಗಾಜನ್ನು ಒಡೆದು ಹಾಕಿದ ನನ್ನ ಪತ್ನಿ ಅಮಿತಾ ಹಾಗೂ ಆಕೆಗೆ ಸಹಕರಿಸಿದ ಮಹಮ್ಮದ್ ರಫೀಕ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ” ಎಂದು ನಿತ್ಯಾನಂದ ಅವರು ಪ್ರತಿದೂರಿನಲ್ಲಿ ದಾಖಲಿಸಿದ್ದಾರೆ.
ಒಟ್ಟಾರೆ ಗಂಡ ಹೆಂಡಿರ ಜಗಳ ಈಗ ತಾರಕಕ್ಕೆ ಏರಿದ್ದು, ಹಾದಿಬೀದಿ ರಂಪವಾಗಿ ಮಾರ್ಪಟ್ಟಿದೆ. ದೂರು ಪ್ರತಿದೂರು ದಾಖಲಾಗಿದೆ. ಕಳಸ ಠಾಣೆಯ ಪೊಲೀಸ್ ಸಿಬ್ಬಂದಿಗೆ ಮತ್ತು ಇಲಾಖೆಯ ಮುಖ್ಯಾಧಿಕಾರಿಗಳಿಗೆ ಈ ಪ್ರಕರಣ ತೀವ್ರ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಪ್ರಕರಣವನ್ನು ಜಿಲ್ಲಾ ಎಸ್ಪಿ ಡಾ. ವಿಕ್ರಂ ಅಟಟೆಯವರು ಗಂಭೀರವಾಗಿ ಪರಿಗಣಿಸಿದ್ದು, ಡಿವೈಎಸ್ಪಿಯವರಿಂದ ತನಿಖೆ ನಡೆಸಿ ಮಾಹಿತಿ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.



