ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಡುವ ಮೂಲಕ ಬಿಜೆಪಿ ಅಧಿಕಾರ ಪಡೆಯುತ್ತಿದೆಯೇ ಹೊರತು ಸತ್ಯ ಸಂಗತಿಗಳನ್ನು ಜನರ ಮುಂದಿಟ್ಟು ಅಧಿಕಾರಕ್ಕೇರುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಗಾಂಧೀಜಿಯವರ ಸತ್ಯ, ಅಹಿಂಸಾ ತತ್ವ, ಅಬೇಡ್ಕರ್ ವಿಚಾರಧಾರೆ ಹಾಗೂ ಸಂವಿಧಾನದ ಆಶಯಗಳನ್ನು ಜನರಲ್ಲಿ ಜಾಗೃತಿ ಮೂಡಿಸಿದರೇ ಬಿಜೆಪಿಯವರನ್ನು ಶಾಶ್ವತವಾಗಿ ಅಧಿಕಾರದಿಂದ ದೂರವಿಡಲು ಸಾಧ್ಯವಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ.
ಬುಧವಾರ ಮೂಡಿಗೆರೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜೈ ಬಾಪು , ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಪೂರ್ವಭಾವಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಮಾವೇಶ ಜನಸೇರಿಸುವ ಕಾರ್ಯಕ್ರಮವಲ್ಲ, ಮಹಾತ್ಮಗಾಂಧಿ, ಅಂಬೇಡ್ಕರ್ ಹಾಗೂ ಸಂವಿಧಾನದ ವಿಚಾರಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ಜನರ ಪಾಲಿಗೆ ಗಾಂಧೀಜಿ, ಅಂಬೇಡ್ಕರ್ ಅವರಿಂದ ಹಾಗೂ ಸಂವಿಧಾನದಿಂದಾಗಿ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ದೊರಕಿದೆ. ಈ ವಿಚಾರಗಳ ಬಗ್ಗೆ ಮೊದಲು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅರಿವು ಹೊಂದುವುದರಿಂದ ದೇಶವನ್ನು ಜಾಗೃತಗೊಳಿಸಲು ಸಾಧ್ಯ. ಈ ಕಾರಣಕ್ಕೆ ಸಮಾವೇಶ ಇಂದಿನ ಅಗತ್ಯವೂ ಆಗಿದೆ ಎಂದರು.
100 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಮಹಾತ್ಮಗಾಂಧೀಜಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಈ ಸ್ಥಳ ಹಾಗೂ ದಿನ ಐತಿಹಾಸಿಕ ದಿನವಾಗಿದೆ. ಗಾಂಧೀಜಿ ಬಂದು ಹೋಗಿದ್ದ ಸ್ಥಳವನ್ನು ನೀಡುವುದೇ ಒಂದು ಸ್ಮರಣೀಯ ಅನುಭವ. ಇಂತಹ ಸ್ಥಳದಲ್ಲಿ 100 ವರ್ಷಗಳ ಬಳಿಕ ಮತ್ತೊಂದು ಐತಿಹಾಸಿಕ ಸಮಾವೇಶ ನಡೆಯುತ್ತಿರುವುದು ಕಾಂಗ್ರೆಸ್ ಎಲ್ಲ ಕಾರ್ಯಕರ್ತರ ಹೆಮ್ಮೆಯಾಗಿದೆ ಎಂದ ಅವರು, ಪಕ್ಷದ ಎಲ್ಲ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಪ್ರಚೋಧಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಯಾವುದೇ ಸಮಾವೇಶ, ಅಧಿವೇಶನ ಪಕ್ಷಕ್ಕಾಗಿ ನಡೆಯುವ ಕಾರ್ಯಕ್ರಮಗಳಲ್ಲ, ಅದು ದೇಶದ ಹಿತಕ್ಕಾಗಿ ನಡೆಯುವ ಕಾರ್ಯಕ್ರಮ. ಪ್ರಧಾನಿ ನೆಹರು, ಇಂದಿರಾಗಾAಧಿ, ರಾಜೀವ್ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಪಕ್ಷದ ಹಲವು ಮಂದಿ ಪ್ರಧಾನಿಗಳ ಸರಕಾರದ ಅವಧಿಯಲ್ಲಿ ದೇಶಾದ್ಯಂತ ಸಾವಿರಾರು ಸಮಾವೇಶ, ಹಲವಾರು ಅಧಿವೇಶನಗಳು ಜರುಗಿವೆ. ಈ ಎಲ್ಲ ಸಮಾವೇಶ, ಅಧಿವೇಶನಗಳ ಫಲವಾಗಿ ದೇಶ ಹಾಗೂ ಜನರ ಏಳಿಗೆಗಾಗಿ ಹಲವಾರು ಯೋಜನೆಗಳು ಜಾರಿಯಾಗಿದ್ದು, ಅವು ಇಂದಿಗೂ ಜಾರಿಯಲ್ಲಿವೆ. 20 ಅಂಶಗಳ ಯೋಜನೆ, ಆಹಾರ ಭದ್ರತಾ ಯೋಜನೆ, ಆರ್ಟಿಇ, ಆರ್ಟಿಐ, ನರೇಗಾ, ಆಧಾರ್ಕಾರ್ಡ್, ಜಿಎಸ್ಟಿಯಂತಹ ನೂರಾರು ಯೋಜನೆಗಳು ಕಾಂಗ್ರೆಸ್ ಸರಕಾರದ ಯೋಜನೆಗಳಾಗಿದ್ದು, ಈ ಯೋಜನೆಗಳ ಪೈಕಿ ಕೆಲ ಯೋಜನೆಗಳಿಗೆ ಹಿಂದೆ ವಿರೋಧ ಮಾಡಿದ್ದವರು ತಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅವುಗಳನ್ನು ಜಾರಿ ಮಾಡಿದ್ದಾರೆ, ಹಾಲಿ ರಾಜ್ಯ ಸರಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳೂ ಕೂಡ ಬಡಜನರ ಸಬಲೀಕರಣಕ್ಕೆ ಪ್ರಮುಖ ಪಾತ್ರ ವಹಿಸಿವೆ ಎಂದ ಅವರು, ಕಾಂಗ್ರೆಸ್ ಪಕ್ಷ ಜನರ ಬದುಕಿಗಾಗಿ ಆಡಳಿತ ನಡೆಸುವ ಪಕ್ಷವಾಗಿದ್ದು, ದೇಶದ ಏಕತೆ, ಸಾಮರಸ್ಯ ಕಾಪಾಡುವ ಪಕ್ಷವಾಗಿದ್ದು, ಧರ್ಮ, ಜಾತಿ ಹೆಸರಿನಲ್ಲಿ ದೇಶ ಒಡೆಯುವ ಪಕ್ಷದವರ ಹುನ್ನಾರವನ್ನು ಅರ್ಥ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವುದು ಇಂದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಜೈ ಬಾಪು, ಜೈಭೀಮ್, ಜೈ ಸಂವಿಧಾನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಬ್ದಾರಿಯಾಗಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಉಸ್ತುವಾರಿ ಮಹೇಶ್, ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ಮುಖಂಡರಾದ ಅಕ್ರಂ ಹಾಜಿ, ಬಿ.ಎಸ್. ಜಯರಾಮ್, ಇಬ್ರಾಹೀಂ, ಹೊಸ್ಕೆರೆ ರಮೇಶ್, ಸಂಪತ್, ಅಶ್ವಥ್, ಕಮಲಾಕ್ಷಿ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.



