ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಜೇನುಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಪ್ತಿಯಲ್ಲಿ ಮಂಗನ ಕಾಯಿಲೆ ಪ್ರಕರಣ ಕಂಡು ಬಂದಿದ್ದು ಸುತ್ತಮುತ್ತಲಿನ ಸಾರ್ವಜನಿಕರು ಆತಂಕಕ್ಕೊಳಗಾಗದೆ ಮುನ್ನೆಚರಿಕೆ ವಹಿಸಬೇಕು ಎಂದು ಚಿಕ್ಕಮಗಳೂರು ತಾಲ್ಲೂಕು ತಹಸೀಲ್ದಾರ್ ಸುಮಂತ್ ಹೇಳಿದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಚಿಕ್ಕಮಗಳೂರು ಇವರ ವತಿಯಿಂದ ನಗರದ ತಾಲ್ಲೂಕು ಕಛೇರಿಯಲ್ಲಿಂದು ಆಯೋಜಿಸಿದ್ದ ಮಂಗನ ಕಾಯಿಲೆ ಕುರಿತು ಮಾಹಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಮಂಗಗಳು ಸಾಯುವುದರಿಂದ ಕಾಯಿಲೆ ಬರುವಿಕೆಯ ಮುನ್ಸೂಚನೆ ದೊರಕುತ್ತದೆ. ಕೆಲವು ಸಲ ಸತ್ತ ಮಂಗಗಳು ಕಣ್ಣಿಗೆ ಕಾಣದೆಯೂ ಈ ಕಾಯಿಲೆ ಕಾಣಿಸಿಕೊಳ್ಳಬಹುದು. ಮಂಗಗಳು ಸಾಯುವ ಅಥವಾ ಮಂಗಗಳು ಸತ್ತ ಕಾಡಿಗೆ ಹೋಗಿ ಬರುವುದರಿಂದ ಜನರಿಗೆ ಕಾಯಿಲೆ ಹರಡಬಹುದು. ಪ್ರತಿಯೊಬ್ಬರು ಪೂರ್ತಿ ತೋಳಿನ ಬಟ್ಟೆಯನ್ನು ಧರಿಸಿ ಸುರಕ್ಷತೆಯ ಕುರಿತು ಎಚ್ಚರ ವಹಿಸಬೇಕು ಎಂದರು.
ಜಿಲ್ಲೆಯ ಶಿರವಾಸೆ, ಮಲ್ಲಂದೂರು, ಎನ್. ಆರ್ ಪುರ ಗಡಿ ಭಾಗದಲ್ಲಿ ಸಾಮಾನ್ಯವಾಗಿ ಪ್ರಕರಣಗಳು ಕಂಡು ಬರುತ್ತವೆ ಪ್ರಸ್ತುತ ಕೊಪ್ಪ ತಾಲ್ಲೂಕು ಜೇನುಗದ್ದೆಯಲ್ಲಿ ವರ್ಷದ ಪ್ರಥಮ ಮಂಗನ ಕಾಯಿಲೆ ಪ್ರಕರಣ ಕಂಡು ಬಂದಿದ್ದು ಇದನ್ನು ಹಾಟ್ ಸ್ಪಾಟ್ ಎಂದು ಗುರುತಿಸಿ ಕಾಯಿಲೆ ತಡೆಗಟ್ಟಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಂಗನ ಸಾವು ಕಂಡು ಬಂದಲ್ಲಿ ಅದರ ಪರೀಕ್ಷೆಗೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಪರೀಕ್ಷಿಸಿ ಕ್ರಮ ವಹಿಸಲು ಸೂಚಿಸಲಾಗಿದೆ ಎಂದ ಅವರು ಸಾರ್ವಜನಿಕರು ಯಾವುದೇ ರೀತಿಯ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಸುರಕ್ಷಿತವಾಗಿರಬೇಕು ಎಂದು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಸೀಮಾ ಮಾತನಾಡಿ ವಿಪರೀತ ಜ್ವರ, ತಲೆನೋವು, ಕೈಕಾಲು ನೋವು ಮತ್ತು ಸೊಂಡನೋವು, ನಿಶ್ಯಕ್ತಿ , ಕಣ್ಣು ಕೆಂಪಾಗುವುದು ರೋಗದ ಪ್ರಮುಖ ಲಕ್ಷಣಗಳಾಗಿದೆ. ಈ ರೀತಿಯ ರೋಗದ ಲಕ್ಷಣ ಕಂಡು ಬಂದಲ್ಲಿ ವೈಧ್ಯರನ್ನು ಸಂಪರ್ಕಿಸಬೇಕು. ಕೊಪ್ಪ ತಾಲ್ಲೂಕು ಜೇನುಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಪ್ತಿಯಲ್ಲಿ ಮಂಗನ ಕಾಯಿಲೆಗೆ ಒಳಗಾದ ವ್ಯಕ್ತಿಯು ಸದ್ಯ ಸಂಪೂರ್ಣ ಆರೋಗ್ಯ ಚೇತರಿಸಿಕೊಂಡಿದ್ದಾರೆ.
ಜಾಗ್ರತವಾಗಿ ವ್ಯಕ್ತಿಯ ಗ್ರಾಮದ ಪ್ರತಿಯೊಂದು ಮನೆಗೂ ಔಷಧಿ ವಿತರಿಸಿದ್ದು ಪ್ರತಿಯೊಬ್ಬರಿಗೂ ಕಾಯಿಲೆ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದ ಅವರು ತೋಟ ಅಥವಾ ಕಾಡುಗಳಿಗೆ ಹೋಗುವಾಗ ಔಷದಿಯನ್ನು ದೇಹಕ್ಕೆ ಹಚ್ಚಿಕೊಂಡು ಬಂದ ನಂತರದಲ್ಲಿ ಬಿಸಿ ನೀರಿನಿಂದ ಬಟ್ಟೆ ತೊಳೆದು ಸ್ನಾನ ಮಾಡುವುದರಿಂದ ಕಾಯಿಲೆ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟನಾಯಕ್, ತಾ.ಪಂ ಸಹಾಯಕ ನಿರ್ದೇಶಕ ಜಯಸಿಂಹ, ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಬಡಿಗೇರ್, ಕಾಂಇಕ ಇಲಾಕೆ ಪ್ರವೀಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.



