ಬಿಲ್ ಪಾವತಿ ಮಾಡಿಲ್ಲವೆಂದು ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಶುಕ್ರವಾರ ಮೂಡಿಗೆರೆ ತಾಲೂಕಿನ ರೈತ ಮುಖಂಡರು ಮೆಸ್ಕಾಂ ಕಚೇರಿಗೆ ಜಮಾಯಿಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಅಮಮನಾಥ್ ಮಾತನಾಡಿ, ತಾಲೂಕಿನಲ್ಲಿ ಕೃಷಿ ಉದ್ದೇಶಕ್ಕಾಗಿ ಪಡೆದ ವಿದ್ಯುತ್ ಸಂಪರ್ಕವನ್ನು ಬಿಲ್ ಕಟ್ಟಿಲ್ಲವೆಂಬ ಕಾರಣ ಮುಂದಿಟ್ಟುಕೊಂಡು ವಿದ್ಯುತ್ ಕಡಿತಗೊಳಿಸುವ ಪ್ರಕ್ರಿಯೆ ಮೆಸ್ಕಾಂ ಇಲಾಖೆ ನಡೆಸುತ್ತಿದೆ. ಇದರಿಂದ ರೈತರು ಸಾಕಷ್ಟು ಸಂಕಷ್ಟಗೊಳಗಾಗುತ್ತಿ ದ್ದಾರೆ. ವರ್ಷದಲ್ಲಿ ಕೇವಲ 10ರಿಂದ 15 ದಿನ ಬಳಸುವ ವಿದ್ಯುತ್ಗೆ ವರ್ಷವಿಡೀ ಶುಲ್ಕ ನೀಡುವಂತೆ ಮೆಸ್ಕಾಂ ಇಲಾಖೆ ಒತ್ತಾಯಿಸುತ್ತಿರುವುದು ಸರಿಯಲ್ಲ. ಸರಕಾರಿದಿಂದ ಸ್ಪಷ್ಟ ಆದೇಶ ಬರುವವರೆಗೆ ಯಾವುದೇ ರೈತರ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಬಾರದೆಂದು ಒತ್ತಾಯಿಸಿದರು.
ರೈತ ಮುಖಂಡ ಬಿ.ಸಿ.ದಯಾಕರ್ ಮಾತನಾಡಿ, ಈಗ ಕಾಫಿ ಗಿಡಗಳಿಗೆ ನೀರಾಯಿಸುವ ಸಮಯವಾಗಿದೆ. ಇಂತಹ ಹೊತ್ತಲ್ಲಿ ಏಕಾಏಕಿ ವಿದ್ಯುತ್ ಕಡಿತಗೊಳಿಸದರೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಸಂಪರ್ಕ ಕಡಿತಗೊಳಿಸುತ್ತೇವೆಂದು ಅನಗತ್ಯವಾಗಿ ರೈತರಿಗೆ ಬೆದರಿಕೆ ಹಾಗೂ ಒತ್ತಡ ಹಾಕಬಾರದು. ಈಗಾಗಲೇ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಮರು ಸಂಪರ್ಕಗೊಳಿಸಬೇಕು. ಶೀಘ್ರದಲ್ಲಿಯೇ ರೈತರು, ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಗಂಭಿರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಎಲ್ಲಾ ರೈತ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಡಿ.ಕೆ.ಲಕ್ಷ್ಮಣ್ಗೌಡ, ಕೆ.ಎಂ.ಜಯರಾಂ, ದುಂಡುಗ ಪ್ರಮೋದ್, ಪ್ರಕಾಶ್ ಬಕ್ಕಿ, ಪ್ರೀತಮ್, ಎಂ.ಪಿ.ಸುನೀಲ್, ರಾಮಕೃಷ್ಣ, ಹರೀಶ್ ಮತ್ತಿತರರಿದ್ದರು.



