ಬೇಸಿಗೆ ಕಾಲ ಬಂತೆಂದರೆ ನೀರಿನಲ್ಲಿ ಈಜಲು ಹೋದವರು ಮುಳುಗಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತವೆ. ಇಂದು ಒಂದೇ ದಿನ ರಾಜ್ಯದ ಎರಡು ಕಡೆ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳು ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನಲ್ಲಿ ತುಂಗಾ ನದಿಯಲ್ಲಿ ಈಜಲು ಹೋದ 9ನೇ ತರಗತಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇತ್ತ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಕಲ್ಯಾಣಿಯಲ್ಲಿ ಈಜಲು ತೆರಳಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಶೃಂಗೇರಿ ಪಟ್ಟಣದ ಜೇಸಿಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆಕಾಶ್ (14 ವರ್ಷ) ತುಂಗಾ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಕಾಶ್ ತನ್ನ ಸ್ನೇಹಿತರೊಂದಿಗೆ ರಜಾದಿನದಂದು ತುಂಗಾ ನದಿಗೆ ಈಜಲು ತೆರಳಿದ್ದು, ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇತ್ತ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಗಾರ್ವೇಬಾವಿ ಪಾಳ್ಯದ ದೀಪು (20), ಯೋಗಿಶ್ವರನ್ (20) ಮೃತ ವಿದ್ಯಾರ್ಥಿಗಳು. ಹೆಬ್ಬಗೋಡಿಯ ಕಾಲೇಜುವೊಂದರ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಗೆ ಈಜಲು ತೆರಳಿದ್ದರು. ಈ ಪೈಕಿ ದೀಪು, ಯೋಗೀಶ್ವರನ್ಗೆ ಈಜಲು ಆಗದೆ ಪರಾದಾಟ ನಡೆಸಿದ್ದಾರೆ. ಕೆಲಕಾಲ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ವಿದ್ಯಾರ್ಥಿಗಳು ಮುಳುಗುತ್ತಿದ್ದ ವೇಳೆ ರಕ್ಷಣೆ ಮಾಡಲು ಸಾಧ್ಯವಾಗದೇ ಉಳಿದ ಸ್ನೇಹಿತರು ಪರದಾಡಿದ್ದಾರೆ. ಈಜಲು ಬಾರದೇ ಒಬ್ಬರಾದ ಮೇಲೆ ಒಬ್ಬರಂತೆ ನೀರಿನಲ್ಲಿ ಮುಳುಗಿ ಸ್ನೇಹಿತರ ಕಣ್ಣೆದುರೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.



