ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಮಾರ್ಗವಾಗಿ ಕಳೆದ ಎರಡ್ಮೂರು ದಿನಗಳಿಂದ ನಿತ್ಯ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆ.
ಬಿಸಿಲಿನಲ್ಲಿ ನಡೆದು-ನಡೆದು ದಣಿದ ಭಕ್ತರಿಗೆ ರಸ್ತೆ ಮಧ್ಯೆ ಅನೇಕ ಸಂಘ ಸಂಸ್ಥೆಗಳು, ಸಾರ್ವಜನಿಕರು ಪಾನಿಯ, ಹಣ್ಣುಹಂಪಲು, ಊಟ ಉಪಹಾರವನ್ನು ನೀಡುತ್ತಿದ್ದಾರೆ.
ವಿಶೇಷ ಎಂದರೆ ಅನೇಕ ಕಡೆ ಯಾವುದೇ ಜಾತಿಮತ ಧರ್ಮದ ಭೇದಭಾವವಿಲ್ಲದೇ ಪಾದಾಚಾರಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೂಡಿಗೆರೆಯಲ್ಲಿ ಮುಸ್ಲಿಂ ಬಾಂಧವರು ಶಿವರಾತ್ರಿ ಪಾದಾಯಾತ್ರಿಗಳಿಗೆ ತಂಪುಪಾನೀಯ ಹಾಗೂ ಕಲ್ಲಂಗಡಿ ಹಣ್ಣು ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಸುಡು ಬಿಸಿಲನ್ನೂ ಲೆಕ್ಕಿಸದೆ ಬರಿಗಾಲಿನಲ್ಲಿ ತೆರುಳುತ್ತಿರುವ ಪಾದಯಾತ್ರಿಗಳನ್ನು ಮುಸ್ಲಿಂ ಬಾಂಧವರು ಪ್ರೀತಿಯಿಂದ ಉಪಚರಿಸುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಬಿಳುಗುಳದ ನೂರುಲ್ ಹುದಾ ಜುಮ್ಮ ಮಸೀದಿಯ ಮುಸ್ಲಿಂ ಬಾಂಧವರು ಧರ್ಮಸ್ಥಳಕ್ಕೆ ತೆರಳುತ್ತಿರುವ ಮಂಜುನಾಥ ಸ್ವಾಮಿಯ ಭಕ್ತರಿಗೆ ಕಲ್ಲಂಗಡಿ ಹಣ್ಣು, ಪಾನೀಯ, ಮಜ್ಜಿಗೆಗಳನ್ನು ನೀಡಿ ಸೌಹಾರ್ಧ ಮನೋಭಾವನೆಯನ್ನು ಮೆರೆಯುತ್ತಿದ್ದಾರೆ. ಇವರ ಸೇವೆ ಮತ್ತು ಉತ್ತಮ ಮನೋಭಾವನೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕರಾದ ಎಂ ಪಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂಧರ್ಭದಲ್ಲಿ ನೂರುಲ್ ಹುದಾ ಜುಮಾ ಮಸ್ಜಿದ್ ಬಿಳಗುಳ ಇದರ ಅಧ್ಯಕ್ಷರಾದ ಅಹಮದ್, ಕಾರ್ಯದರ್ಶಿಗಳಾದ ಮೊಹಮ್ಮದ್ ಬಾಬಾ, ಸಮಾಜ ಸೇವಕರಾದ ಅಬ್ದುಲ್ ರೆಹಮಾನ್, ಯೂತ್ ಕಮಿಟಿ ಅಧ್ಯಕ್ಷರಾದ ಕೆ ಕೆ ಸಿದ್ದೀಕ್, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಚಂದ್ರು ಒಡೆಯರ್, ಅಲ್ತಾಫ್ ಬಿಳಗುಳ, ಅಬ್ಬು ಕತ್ತಾರ್, ಹನೀಫ್ ಮಿಲ್ಟ್ರಿ. ಅಬ್ದುಲ್ಲ, ಹೋಟೆಲ್ ಶಂಶುದ್ದಿನ್, ಶಂಶುದ್ದೀನ್ ಬಿಳಗುಳ, ಪುಟ್ಟಣ್ಣ, ಅರವಿಂದ್ ಬಿಳಗುಳ, ನಾಗರಾಜು, ಕಾಫಿನಾಡು ಸಮಾಜ ಸೇವಕ ಸಂಘದ ಅದ್ಯಕ್ಷರಾದ ಹಸೈನಾರ್ ಬಿಳಗುಳ ಮತ್ತು ಪದಾಧಿಕಾರಿಗಳು ಮದರಸ ಮಕ್ಕಳು, ಗ್ರಾಮಸ್ಥರು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರು.



