ಅಕ್ರಮ ಮದ್ಯೆ ಮಾರಾಟದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೋಮವಾರ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಮುಖಂಡರು ಹಾಗೂ ಜಿ.ಹೊಸಳ್ಳಿ ಮಹಿಳೆಯರು ಪಟ್ಟಣದ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗೋಣಿಬೀಡು ಗ್ರಾ.ಪಂ. ಸದಸ್ಯ ಆನಂದ್ ಮಾತನಾಡಿ, ಅಕ್ರಮ ಮದ್ಯ ಮಾರಾಟದಿಂದಾಗಿ ಜಿ.ಹೊಸಳ್ಳಿ ಗ್ರಾಮದಲ್ಲಿ ಅನೇಕ ಮಂದಿ ಪುರುಷರು ಕುಡಿತಕ್ಕೆ ಬಲಿಯಾಗಿದ್ದಾರೆ. ದುಡಿದ ಹಣದಲ್ಲಿ ಕುಟುಂಬ ನಿರ್ವಹಿಸದೇ ಸಂಪೂರ್ಣ ಕುಡಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಹಿಳೆಯರಿಗೂ ಕೂಲಿ ಮಾಡಿಕೊಂಡು ಕುಟುಂಬ ಸಾಗಿಸಲು ಬಿಡದೇ ಅವರಿಂದಲೂ ಹಣ ಕಿತ್ತುಕೊಂಡು ಹೋಗಿ ಕುಡಿಯುತ್ತಿದ್ದಾರೆ. ಇದರಿಂದ ಮಹಿಳೆಯರು ತೀವ್ರ ಸಂಕಷ್ಟಕ್ಕೆ ಸಲುಕಿದ್ದಾರೆಂದು ಹೇಳಿದರು.
ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಮುಖಂಡರಾದ ಜ್ಯೋತಿ ವಿಠಲ್ ಮಾತನಾಡಿ, ಗೋಣಿಬೀಡು ವ್ಯಾಪ್ತಿಯಲ್ಲಿ ಅನೇಕ ದಿನಸಿ ಅಂಗಡಿಗಳಲ್ಲಿ ದುಪ್ಪಟ್ಟು ದರದಲ್ಲಿ ಅಕ್ರಮ ಮದ್ಯೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಡಿಸಿ ಹಾಗೂ ತಹಸೀಲ್ದಾರರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಬೇಡಿಕೆಯನ್ನು ಅಬಕಾರಿ ಅಧಿಕಾರಿಗಳು ನೆರವೇರಿಸದಿದ್ದರೆ ಅಬಕಾರಿ ಇಲಾಖೆ ಇದ್ದೂ ಪ್ರಯೋಜನವಿಲ್ಲ. ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುವ ಇಲ್ಲಿನ ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಶಾಸಕರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಕಾಳಜಿ ಇದ್ದರೆ ಅಕ್ರಮ ಮದ್ಯ ಮಾರಾಟದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ಒತ್ತಾಯಿಸಿದರು.
ಬಳಿಕ ಅಕ್ರಮ ಮದ್ಯ ಮಾರಾಟ ಮಾಡುವವರ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜನರ ಅಹವಾಲು ಆಲಿಸಿದ ಅಬಕಾರಿ ನಿರೀಕ್ಷರ ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ, ಗಾಂಜಾ, ಡ್ರಕ್ಸ್ ಹಾವಳಿ ಬಗ್ಗೆ ಇಲಾಖೆಯಿಂದ ಕಡಿವಾಣ ಹಾಕುತ್ತಲೇ ಬರಲಾಗಿದೆ. ಜನರು ಮಾಹಿತಿ ನೀಡದಿದ್ದರೂ ನಾವೇ ಪರಿಶೀಲನೆ ನಡೆಸಿ ತಿಂಗಳಿಗೆ 3ರಿಂದ 4 ನಾಲ್ಕು ಪ್ರಕರಣ ದಾಖಲು ಮಾಡಲಾಗುತ್ತಿದೆ. ಈಗ ಸಿಕ್ಕಿರುವ ಮಾಹಿತಿ ಪರಿಶೀಲಿಸಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಮುಖಂಡರಾದ ಎಚ್.ಎ.ವಿಠಲ್, ಎಸ್.ಶೇಖರ್, ಗ್ರಾಮಸ್ಥರಾದ ಗಿರಿಜಾ, ಹೂವಮ್ಮ, ಆಶಾ, ಪುಷ್ಪಾ, ಚಲುವಿ, ಸುನಂದಾ ಮತ್ತಿತರಿದ್ದರು.



