ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಮನೆ, ಕಟ್ಟಡ, ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದರಂತೆ ನಗರದಲ್ಲಿ ಇಂದು ಇ-ಖಾತಾ ಅಭಿಯಾನ ಆರಂಭಿಸಲಾಗಿದೆ ಎಂದು ಚಿಕ್ಕಮಗಳೂರು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.
ಅವರು ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪೌರಾಡಳಿತ ನಿರ್ದೇಶನಾಲಯ ಮತ್ತು ನಗರಸಭೆ ಇವರುಗಳು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ, ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಬರುವ ನಾಗರೀಕರು ಆಸ್ತಿ ತೆರಿಗೆಯನ್ನು ಪಾವತಿಸದೇ ಇರುವವರು ಇ-ಖಾತಾ ಅಭಿಯಾನದಲ್ಲಿ ಪಾಲ್ಗೊಂಡು ತೆರಿಗೆ ಪಾವತಿಸಿ, ಸಕ್ರಮ ಮಾಡಿಕೊಳ್ಳಲು ಅಪೂರ್ವ ಅವಕಾಶ ಇದಾಗಿದ್ದು, ಇದರಿಂದ ಸ್ವತ್ತಿನ ಬಿ-ಖಾತೆ ಮಾಡಿಕೊಂಡು ಅನುಕೂಲ ಪಡೆಯಿರಿ ಎಂದು ಹೇಳಿದರು.
ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಈ ತೆರಿಗೆ ಸಂಗ್ರಹ ಬಹಳ ಮುಖ್ಯವಾಗಿದ್ದು, ಸರ್ಕಾರ ನೀಡಿರುವ ಈ ಮೂರು ತಿಂಗಳ ಕಾಲಾವಕಾಶವನ್ನು ಸದ್ಭಳಕೆ ಮಾಡಿಕೊಂಡು ಆಸ್ತಿಯ ಮೌಲ್ಯವರ್ಧಿತ ಗೊಳಿಸಿಕೊಳ್ಳುವಂತೆ ಎಂದು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಮನೆ ನಿವೇಶನ ನಿರ್ಮಿಸಿಕೊಂಡಿರುವ ನಾಗರೀಕರು ಕೂಡಲೇ ಸರ್ಕಾರ ನೀಡಿರುವ ಬಿ-ಖಾತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆಸ್ತಿಗಳ ಮೌಲ್ಯ ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.
ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು, ಅನಧಿಕೃತ ಆಸ್ತಿಗಳು ಇವೇ ಎಂಬ ಮಾಹಿತಿ ಇದ್ದು, 2003-04 ನೇ ಸಾಲಿನಲ್ಲಿ ಸರ್ವೇ ಕಾರ್ಯ ಕೈಗೊಂಡಾಗ 6 ಸಾವಿರ ಅನಧಿಕೃತ ಕಟ್ಟಡಗಳು ಇರುವುದು ಪತ್ತೆಹಚ್ಚಲಾಗಿತ್ತು. ಈಗ ಈವರಗೆ ಇನ್ನೂ 4 ಸಾವಿರ ಹೆಚ್ಚಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಸರ್ಕಾರ ಸೌಲಭ್ಯ ಪಡೆದು, ಯಾವುದೇ ರೀತಿಯ ತೆರಿಗೆ ಪಾವತಿ ಮಾಡದೇ ವಾಸ ಮಾಡುತ್ತಿರುವ ನಿವಾಸಿಗಳಿಗೆ ಅನುಕೂಲವಾಗಬೇಕೆಂಬ ದೃಷ್ಠಿಯಿಂದ ಖಾಲಿ ನಿವೇಶನ ಅಥವಾ ಕಟ್ಟಡ ಮನೆ ಹೊಂದಿರುವ ನಾಗರೀಕರು 1 ವರ್ಷದ ಆಸ್ತಿ ತೆರಿಗೆಯನ್ನು ಪಾವತಿಸಿ, ಬಿ-ಖಾತಾ ಮಾಡಿಸಿಕೊಳ್ಳಬೇಕೆಂದು ಎಂದು ತಿಳಿಸಿದರು.
ಬಿ-ಖಾತೆ ಆದ ನಂತರ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಆಸ್ತಿಗಳಿಗೆ ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡುತ್ತೇವೆ ಈ ದಾಖಲೆಗಳನ್ನು ಪಡೆದುಕೊಂಡು ಬ್ಯಾಂಕಿನಲ್ಲಿ ಸಾಲ ಸೌಲಭ್ಯ ಮತ್ತು ಮಾರಾಟ ಮಾಡಲು ಸಹಾಯವಾಗುತ್ತದೆ ಎಂದರು.
10-05-2024 ಹಿಂದೆ ಆಗಿರುವ ಆಸ್ತಿ ನೊಂದಣಿ ಪತ್ರ ಪರಿಗಣಿಸಿ, 10-05-2025 ರವರೆಗೆ ಬಿ-ಖಾತಾ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ನಿಗಧಿತ ಅವಧಿಯಲ್ಲಿ ನಾಗರೀಕರು ಆಸ್ತಿ ನೊಂದಣಿ ಮಾಡಿಕೊಳ್ಳಬೇಕು ಇಲ್ಲವಾದರೆ ಮುಂದೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಈ ತಿಂಗಳ ಅಂತ್ಯದೊಳಗೆ ಖಡ್ಡಾಯವಾಗಿ ನೀರಿನ ತೆರಿಗೆ ಸೇರಿದಂತೆ ಎಲ್ಲಾ ರೀತಿಯ ತೆರಿಗೆಗಳನ್ನು ಪಾವತಿಸಬೇಕು ವಿಳಂಬ ಮಾಡಿದರೆ ನಗರಸಭೆಯಿಂದ ನೀಡಲಾಗಿರುವ ಒಳಚರಂಡಿ ಸಂಪರ್ಕ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸಂಬಂಧ ನಗರ ವ್ಯಾಪ್ತಿಯಲ್ಲಿ ಪತ್ರಿಕೆ, ದೂರದರ್ಶನ ಆಟೋದಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುತ್ತಿದ್ದೇವೆ ಇಂದಿನಿಂದ 10 ದಿನಗಳ ಕಾಲ ಜಾಥಾ ನಡೆಸಿ, ಜಾಗೃತಿ ಮೂಡಿಸಲಾಗುವುದು. ಬಾಕಿ ಉಳಿಸಿಕೊಂಡಿರುವ ನಗರದ ನಾಗರೀಕರು ಕೂಡಲೇ ತೆರಿಗೆಗಳನ್ನು ಪಾವತಿಸಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಮೊದಲಿಗೆ ಕಂದಾಯ ಅಧಿಕಾರಿ ಶಿವಾನಂದ ಸ್ವಾಗತಿಸಿದರು.



