oplus_0
ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ರಾಜಸ್ಥಾನ ಮೂಲದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ಸಮೀಪ ನಡೆದಿದೆ.
ಮೃತರನ್ನು ಜಗದೀಶ್ (33) ಹಾಗೂ ಚೋಟಾಸಿಂಗ್ (28) ಎಂದು ಗುರುತಿಸಲಾಗಿದೆ. ರಾಜಸ್ಥಾನ ಮೂಲದ 12 ಜನ ಸ್ನೇಹಿತರು ಬೆಂಗಳೂರಿನಲ್ಲಿ ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೋಳಿ ಹಬ್ಬದ ಪ್ರಯುಕ್ತ ಇವರೆಲ್ಲಾ ಪ್ರವಾಸಕ್ಕೆಂದು ಎರಡು ಕಾರಿನಲ್ಲಿ ಕಳಸ ಭಾಗಕ್ಕೆ ಬಂದಿದ್ದರು ಎನ್ನಲಾಗಿದೆ.
ಯುವಕರು ಕಳಸ ಸಮೀಪದ ವಶಿಷ್ಠತೀರ್ಥದಲ್ಲಿ ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ವೀಕ್ಷಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪ್ರವಾಸಿಗರು ನದಿಯಲ್ಲಿ ಆಟವಾಡಲು ತೆರಳಿದ್ದು, ಉಳಿದವರು ತೂಗುಸೇತುವೆಯ ಮೇಲೆ ಇದ್ದರು. ನದಿಯಲ್ಲಿ ಆಟವಾಡಲು ಹೋದ ಇಬ್ಬರು ನದಿಯ ಹರಿವಿನ ಸೆಳೆತಕ್ಕೆ ಸಿಲುಕಿದ್ದು, ಈಜು ಬಾರದ ಕಾರಣ ನದಿಯಲ್ಲಿ ಮುಳುಗಿದ್ದಾರೆ.

ತೂಗುಸೇತುವೆ ಇರುವ ಜಾಗ ಅತ್ಯಂತ ಅಪಾಯಕಾರಿಯಾಗಿದೆ. ಭಾರೀ ಆಳ ಇರುವ ಜಾಗವಾಗಿದ್ದು, ಈ ಸ್ಥಳದಲ್ಲಿ ಮಾಹಿತಿ ಇಲ್ಲದವರು ಈಜುವುದು ಕಷ್ಟ. ಆದರೆ ಪ್ರವಾಸಿಗರಿಗೆ ಈ ಸ್ಥಳದ ಪರಿಚಯ ಇಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಲ್ಪೆಯ ಮುಳುಗು ತಜ್ಞ ಭಾಸ್ಕರ್ ಇಬ್ಬರ ಮೃತದೇಹಗಳನ್ನು ಮೇಲಕ್ಕೆ ಎತ್ತಿದ್ದಾರೆ. ಅವರು ನೀರಿನಲ್ಲಿ ಮುಳುವಾಗ ಜೊತೆಗಿದ್ದ ಸ್ನೇಹಿತರು ರಕ್ಷಿಸುವ ಪ್ರಯತ್ನ ಮಾಡಿದರೂ ನದಿ ಆಳವಿದ್ದ ಕಾರಣ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



