ಆಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಉಳ್ಳವರ ಪರವಾಗಿಯೇ ಇವೆಯೇ ಹೊರತು ಬಡವರಿಗೆ ಕನಿಷ್ಠ ಒಂದು ನಿವೇಶನ ನೀಡುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಸಿಪಿಐಎಂಎಲ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಆರೋಪಸಿದ್ದಾರೆ.
ಅವರು ಬುಧವಾರ ಮೂಡಿಗೆರೆ ಪತ್ರಕತ್ರರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ಫಾ.ನಂ 50 ಮತ್ತು 53 ಯಲ್ಲಿ ಅಕ್ರಮ ಅರ್ಜಿಗಳನ್ನು ಜಿಲ್ಲಾಡಳಿತ ವಜಾಗೊಳಿಸಲು ಮುಂದಾಗಿರುವುದು ಸ್ವಾಹತಾರ್ಹ: ಈ ಪ್ರಕ್ರಿಯೆಯನ್ನು ಅಧಿಕಾರಿಗಳು ಚುರುಕುಗೊಳಿಸಿ ಅಕ್ರಮವಾಗಿರುವ ಭೂ ಮಾಲೀಕರ ಅರ್ಜಿಗಳನ್ನು ಮುಲಾಜಿಲ್ಲದೇ ವಜಾಗೊಳಿಸಬೇಕು. ಕಾನೂನು ಬದ್ದವಾಗಿ ಭೂಮಿ ಪಡೆದುಕೊಂಡಿರುವ ಸಣ್ಣ ರೈತರ ದಾಖಲೆಗಳನ್ನು ವಜಾಗೊಳಿಸಬಾರದು. ಮಲೆನಾಡು ಭೂಮಿಗೆ ಭೂಮಿತಿ ಕಾಯಿದೆ ನಿಗದಿ ಮಾಡಿ, ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಭೂ ಮಾಲೀಕರಿಗೆ ನೀಡಲು ಜಿಲ್ಲೆಯ ಎಲ್ಲಾ ಶಾಸಕರು ಸರಕಾರಕ್ಕೆ ಒತ್ತಡ ಹಾಕಿ ಯಶಸ್ವಿಯಾಗಿದ್ದಾರೆ. ಆದರೆ ಕಳೆದ 30 ವರ್ಷದಿಂದಲೂ ನಿವೇಶನ ಕೊರತೆಯಿದ್ದು, ಬಡವರಿಗೆ ನಿವೇಶನ ನೀಡುವ ಬಗ್ಗೆ ಕಿಂಚಿತ್ತೂ ಚಿಂತನೆ ನಡೆಸುತ್ತಿಲ್ಲ. ಈಗ ಅಕ್ರಮ ಭೂಮಿ ವಜಾಗೊಳಿಸಲು ಮುಂದಾಗಿದ್ದರಿಂದ ಬಹುತೇಕ ಭೂಮಾಲೀಕರು ಇತ್ತೀಚೆಗೆ ಶಾಸಕರನ್ನು ಭೇಟಿ ಮಾಡಿ ಅರ್ಜಿ ವಜಾ ಪ್ರಕ್ರಿಯೆ ಕೈ ಬಿಡುವಂತೆ ಒತ್ತಡ ಹಾಕಿದ್ದಾರೆ. ಇದಕ್ಕೆ ಶಾಸಕರೂ ಕೂಡ ಬೆಂಬಲ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಭೂಮಾಲೀಕರ ಪರವಾಗಿ ಕೆಲಸ ಮಾಡುವುದನ್ನು ಕೈ ಬಿಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿಯಲ್ಲಿ ನಿವೃತ್ತ ಅಧಿಕಾರಿಗಳು ಹಾಗೂ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಅವರು ಭೂಮಾಲೀಕರಿಗೆ ಅಕ್ರಮವಾಗಿ ಭೂಮಿ ಕೊಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕೆಂದ ಅವರು, ತಾಲೂಕಿನಲ್ಲಿ ಹಿಂದಿನಿಂದಲೂ ಆಡಳಿತ ನಡೆಸಿದ ಸರಕಾರಗಳಿಗೆ ನಿವೇಶನ ಸಮಸ್ಯೆ ಬಗೆಹರಿಸಲು ಇದೂವರೆಗೂ ಸಾಧ್ಯವಾಗಿಲ್ಲ. ಇಲ್ಲಿನ ಶಾಸಕರು 100 ಎಕರೆ ಭೂಮಿ ನಿವೇಶನ ರಹಿತರಿಗೆ ಮೀಸಲಿರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದೂವರೆಗೂ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಶೀಘ್ರವಾಗಿ ನಿವೇಶನ ಸಮಸ್ಯೆ ಬಗೆಹರಿಸಲು ಶಾಸಕರು ಮುಂದಾಗಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಂಚಾಲಕ ಕೆ.ಕೆ.ಕೃಷ್ಣಪ್ಪ, ತಾಲೂಕು ಸಂಚಾಲಕ ಶಿವಪ್ಪ ಉಪಸ್ಥಿತರಿದ್ದರು.



