ಈ ದೇಶದ ಸಕಲ ಸಂಪತ್ತನ್ನು ಸೃಷ್ಟಿಸಿದವರು ದುಡಿಯುವ ವರ್ಗ ಮತ್ತು ದಮನಿತ ಜನಾಂಗ ಎಂಬ ಕಡು ಸತ್ಯಕ್ಕೆ ಈಗ ದೊಡ್ಡ ಸವಾಲು ಎದುರಾಗಿದೆ ಎಂದು ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಮಲೆನಾಡು ತೋಟ ಕಾರ್ಮಿಕ ಸಂಘ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಏರ್ಪಡಿಸಿದ್ದ 140ನೇ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ನೆಲ, ಜಲ, ಪ್ರಕೃತಿಯ ಸಂಪತ್ತನ್ನು ದೋಚುವವರಿಗೆ ಹೆಚ್ಚು ಪ್ರಾತಿನಿಧ್ಯ ಸಿಗುತ್ತಿರುವುದು ದುರಂತ. ದೇಶದಲ್ಲಿ ಶೇ.85 ರಷ್ಟು ಕಾರ್ಮಿಕರಿದ್ದಾರೆ. ಅವರು ಪಡುವ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಇದನ್ನು ದುಡಿಯುವ ವರ್ಗ ಹಾಗೂ ದಮನೀತ ಜನರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ನಾವೆಲ್ಲಾ ಜಾಗೃತರಾಗಿ ತಮ್ಮ ಹಕ್ಕು ಪಡೆಯಲು ಹೋರಾಟ ರೂಪಿಸಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ವಕೀಲ ಚಂದ್ರು ಮಾತನಾಡಿ, ಈ ಸಮಾಜದ ಅಭಿವೃದ್ಧಿಗೆ ಕಾರ್ಮಿಕರು ಪಾತ್ರ ಅಪಾರವಾಗಿದೆ. ಆದರೆ ಕಾರ್ಮಿಕರು ಕಡಿಮೆ ವೇತನ, ಹೆಚ್ಚು ಕೆಲಸದ ಒತ್ತಡ, ಭದ್ರತೆ ಕೊರತೆಗೆ ಮುಕ್ತಿ ದೊರಕಿಸಲು ಆಳುವ ಸರಕಾರಗಳು ಮುಂದಾಗಬೇಕಿದೆ. ಎಲ್ಲಾ ಕಾರ್ಮಿಕರು ಗೌರವದಿಂದ ಬಾಳುವಂತಾಗಬೇಕು. ಆಗ ಮಾತ್ರ ಕಾರ್ಮಿಕ ದಿನಾಚರಣೆಗೆ ಅರ್ಥ ಸಿಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಮಿಕ ಸಂಘಟನೆ ಮುಖಂಡರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಗೋಪಾಲ ವಹಿಸಿದ್ದರು. ಎಸ್.ವಿಜಯ್, ಸಂದೀಪ್, ರೋಜಿ, ಲಕ್ಷ್ಮೀ, ವಾಸುದೇವ, ಉಮೇಶ್, ಶೇಖರ್ ಮತ್ತಿತರರಿದ್ದರು.



