ಬ್ಯಾಂಕ್ ಎದುರು ನಿಲ್ಲಿಸಿದ್ದ ಸ್ಕೂಟರ್ನ ಡಿಕ್ಕಿಯಿಂದ 13 ಲಕ್ಷ ರೂ. ನಗದನ್ನು ಖದೀಮರು ದೋಚಿರುವ ಘಟನೆ ಸಕಲೇಶಪುರ ಪಟ್ಟಣದ ಬಿ.ಎಂ ರಸ್ತೆಯಲ್ಲಿ ನಡೆದಿದೆ.
ಕುಡುಗರಹಳ್ಳಿ ಗ್ರಾಮದ ಯೋಗೇಶ್ ಹಣ ಕಳೆದುಕೊಂಡ ವ್ಯಕ್ತಿ. ಯೋಗೇಶ್ ಅವರು ತುರ್ತು ಕಾರ್ಯದ ನಿಮಿತ್ತ ಮನೆಯಲ್ಲಿದ್ದ ಚಿನ್ನಾಭರಣವನ್ನು ನಗರದ ಬ್ಯಾಂಕ್ ಆಫ್ ಬರೋಡದಲ್ಲಿ ಗಿರವಿ ಇಟ್ಟು 13 ಲಕ್ಷ ರೂ. ಸಾಲ ಪಡೆದಿದ್ದರು. ಇನ್ನೂ ಅಗತ್ಯವಿದ್ದ ಹೆಚ್ಚುವರಿ 2.5 ಲಕ್ಷ ರೂ. ಹಣವನ್ನು ಡ್ರಾ ಮಾಡಲು ಕೆನರಾ ಬ್ಯಾಂಕ್ ಶಾಖೆಗೆ ಬಂದಿದ್ದರು. ಕೆನರಾ ಬ್ಯಾಂಕ್ನೊಳಗೆ ಹೋಗುವ ಮುನ್ನ ಈ ಮೊದಲು ತಂದಿದ್ದ 13 ಲಕ್ಷ ರೂ. ಹಣವನ್ನು ಸ್ಕೂಟರ್ನ ಡಿಕ್ಕಿಯಲ್ಲಿ ಇಟ್ಟು, ಲಾಕ್ ಮಾಡಿ ಹೋಗಿದ್ದರು. ಬ್ಯಾಂಕ್ನೊಳಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಡಿಕ್ಕಿಯನ್ನು ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ.
ಯೋಗೇಶ್ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಖದೀಮರಿಗೆ ಬಲೆ ಬೀಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



