ನಮ್ಮ ಮುಂದಿನ ಪೀಳಿಗೆ ಉಳಿಯಲು ಹಾಗೂ ಮೀಸಲಾತಿ ಹಕ್ಕು ಪಡೆಯಲು ಜನಗಣತಿ ಸಂದರ್ಭದಲ್ಲಿ ಹೆಮ್ಮೆಯಿಂದ ಹೊಲಯ ಎಂದು ನಮೂದಿಸಬೇಕೆಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಸೋಮವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಾಶಿವ ಆಯೋಗವು ಬಲಗೈ ಸಮುದಾಯಕ್ಕೆ ಬಾರಿ ಅನ್ಯಾಯ ಮಾಡಿದೆ. ನಮ್ಮ ಸಮುದಾಯದ 8 ಲಕ್ಷ ಜನರನ್ನು ಮಾದಿಗ ಸಮುದಾಯಕ್ಕೆ ಸೇರಿಸಿ, ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಪಡೆಯಲು ಮುಂದಾಗಿತ್ತು. ಹೊಲಯ, ಬಲಗೈ, ಛಲವಾದಿ ಸಮುದಾಯ ಕಡಿಮೆ ಇದೆ ಎಂದು ಈ ಸಮುದಾಯಕ್ಕೆ ಶೇ.5.3 ರಷ್ಟು ಮೀಸಲಾತಿ ನೀಡಲು ಷಡ್ಯಂತರ ನಡೆದಿತ್ತು. ನಮ್ಮ ಸಂಖ್ಯೆ ಕಡಿಮೆಯಾಗಿರುವ ವ್ಯತ್ಯಾಸಕ್ಕೆ ತಿಲಾಂಜಲಿ ಹಾಕುವ ಸಮಯ ಬಂದಿದೆ. ಹಾಗಾಗಿ ಮೂಲ ಹೊಲಯ ಸಮುದಾಯದವರು ಈ ಬಾರಿ ಜನಗಣತಿಯಲ್ಲಿ ನಿರ್ಲಕ್ಷ್ಯ ತೋರದೇ ಹೊಲಯ ಎಂದು ಬರೆಸುವ ಮೂಲಕ ನಮ್ಮ ಸಂಖ್ಯೆ ಅಧಿಕಗೊಳಿಸಲು ಮುಂದಾಗಬೇಕೆಂದು ಹೇಳಿದರು.
ಮೂಡಿಗೆರೆ ತಾಲೂಕಿನಲ್ಲಿ ಶೇ.99 ಹೊಲಯ ಸಮುದಾಯದವರಿದ್ದಾರೆ. ಮಳಲೂರು ಗ್ರಾ.ಪಂ. ವ್ಯಾಪ್ತಿಯ ತಿಮ್ಮನಹಳ್ಳಿಯಲ್ಲಿ 20 ಕುಟುಂಬ ಹೊಲಯ ಸಮುದಾಯದವರಿದ್ದಾರೆ. ಹರಿಹರದಳ್ಳಿ ಮತ್ತು ಅಂಬಳೆಯಲ್ಲಿ ಹೊಲಯ ಹಾಗೂ ಮಾದಿಗರು ಸಂಖ್ಯೆ ಮಿಶ್ರಣವಾಗಿದೆ. ಅಲ್ಲಿ ನಮ್ಮ ಸಮುದಾಯದವರು ಈ ಬಗ್ಗೆ ಎಚ್ಚರವಹಿಸಬೇಕು. ಅಲ್ಲದೇ ಮಂಗಳೂರು ಮೂಲದಿಂದ ಬಂದು ಇಲ್ಲಿ ನೆಲೆಸಿರುವ ಕರಾದಿ, ಮುಂಡಾಲ ಮತ್ತು ಮುಗೇರಾ ಸಮುದಾಯದವರು ಕೂಡ ಹೊಲಯಕ್ಕೆ ಬರುವುದರಿಂದ ಗಣತಿ ಸಂದರ್ಭದಲ್ಲಿ ಹೊಲಯ ಎಂದು ಬರೆಸಬೇಕೆಂದು ಮನವಿ ಮಾಡಿದರು.
ಬಿಎಸ್ಪಿ ಮುಖಂಡ ಯು.ಬಿ.ಮಂಜಯ್ಯ, ಮುಖಂಡರಾದ ಮಂಜುನಾಥ್ ಚಕ್ರಮಣಿ, ಕುಮರ್ ಬಕ್ಕಿ, ಗಣೇಶ್, ಶಿವು ಹೆಸಗಲ್, ಸುದೀಪ್ ಹೊರಟಿ ಉಪಸ್ಥಿತರಿದ್ದರು.



