ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.
ಇಂದು “ಆಪರೇಷನ್ ಸಿಂಧೂರ್” ಬಗ್ಗೆ ಭಾರತೀಯ ಸಶಸ್ತ್ರ ಪಡೆಗಳ ಇಬ್ಬರು ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಸೇನೆ ಮತ್ತು ವಾಯುಪಡೆಯ ಹಿರಿಯ ಅಧಿಕಾರಿಗಳಾದ ಈ ಇಬ್ಬರೂ ಮಹಿಳೆಯರು, ಪಾಕಿಸ್ತಾನದ ಒಂಬತ್ತು ಪ್ರಮುಖ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ನಿಖರ ದಾಳಿಯ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲಗಮ್ನಲ್ಲಿ ಪ್ರವಾಸಿಗರನ್ನು ಅದರಲ್ಲೂ ಪುರುಷರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಲ್ಲಿ ತಮ್ಮ ಪತಿಯರನ್ನು ಕಳೆದುಕೊಂಡ ಮಹಿಳೆಯರಿಗೆ ಗೌರವ ಸಲ್ಲಿಸಲು ಉಗ್ರರ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗೆ “ಆಪರೇಷನ್ ಸಿಂಧೂರ್” ಎಂದು ಹೆಸರಿಡಲಾಗಿದೆ.
ಹೆಸರಿನ ಜೊತೆಗೆ, ಮಾಧ್ಯಮಗಳಿಗೆ ಬ್ರೀಫಿಂಗ್ ಅನ್ನು ಮುನ್ನಡೆಸಲು ಸೇನೆ ಮತ್ತು ವಾಯುಪಡೆಯ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಿರುವುದು ದುಃಖಿತ ಮಹಿಳೆಯರಿಗೆ ಸಲ್ಲಿಸಿದ ಪ್ರಬಲ ಗೌರವವೆಂದು ಪರಿಗಣಿಸಲಾಗಿದೆ.
ಯಾರು ಈ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ?
ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್ನ ಅಧಿಕಾರಿಯಾಗಿರುವ ಕರ್ನಲ್ ಸೋಫಿಯಾ ಖುರೇಷಿ ಅವರು ಗುಜರಾತ್ ಮೂಲದವರಾಗಿದ್ದು, ಸೇನಾ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಾರೆ. ಖರೇಷಿ ಅವರ ಅಜ್ಜ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಭಾರತೀಯ ನೆಲದಲ್ಲಿ ಇದುವರೆಗೆ ನಡೆಸಿದ ಅತಿದೊಡ್ಡ ಬಹುರಾಷ್ಟ್ರೀಯ ಮಿಲಿಟರಿ ಸಮರಾಭ್ಯಾಸಗಳಲ್ಲಿ ಒಂದಾದ ಫೋರ್ಸ್ 18 ರಲ್ಲಿ ಭಾರತೀಯ ಸೇನಾ ತರಬೇತಿ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಖುರೇಷಿ ಪಾತ್ರರಾಗಿದ್ದಾರೆ.
ಕರ್ನಲ್ ಖುರೇಷಿ ಜೀವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು 1999 ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (ಒಟಿಎ) ಯಿಂದ ನಿಯೋಜನೆಗೊಂಡರು. ಖುರೇಷಿ 2006 ರಲ್ಲಿ ಕಾಂಗೋದಲ್ಲಿ ಭಾರತೀಯ ಕಾರ್ಯಾಚರಣೆಯ ಭಾಗವಾಗಿದ್ದರು.
ಇನ್ನು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಭಾರತೀಯ ವಾಯುಪಡೆಯಲ್ಲಿ(ಐಎಎಫ್) ವಿಶೇಷ ಹೆಲಿಕಾಪ್ಟರ್ ಪೈಲಟ್ ಆಗಿದ್ದು, “ವ್ಯೋಮಿಕಾ” (ಆಕಾಶದ ಪುತ್ರಿ) ಎಂಬ ಹೆಸರು ಪೈಲಟ್ ಆಗುವ ಅವರ ಬಾಲ್ಯದ ಕನಸನ್ನು ಪ್ರತಿಬಿಂಬಿಸುತ್ತದೆ.
ಕಾಲೇಜು ದಿನಗಳಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್ಸಿಸಿ) ಸೇರಿದ್ದ ವ್ಯೋಮಿಕಾ, ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಡಿಸೆಂಬರ್ 18, 2019 ರಂದು IAF ಸೇರಿದ ವ್ಯೋಮಿಕಾ ಅವರನ್ನು ಹೆಲಿಕಾಪ್ಟರ್ ಪೈಲಟ್ ಆಗಿ ನಿಯೋಜಿಸಲಾಯಿತು.
ಈಗ ಅನುಭವಿ ಪೈಲಟ್ ಆಗಿರುವ ವ್ಯೋಮಿಕಾ ಅವರು 2,500 ಗಂಟೆಗಳಿಗೂ ಹೆಚ್ಚು ಸಮಯ ಯುದ್ಧ ಹೆಲಿಕಾಪ್ಟರ್ ಗಳನ್ನು ಹಾರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಂತಹ ಎತ್ತರದ ಪ್ರದೇಶಗಳು ಸೇರಿದಂತೆ ಭಾರತದ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ‘ಚೇತಕ್’ ಮತ್ತು ‘ಚೀತಾ’ ನಂತಹ ಹೆಲಿಕಾಪ್ಟರ್ಗಳನ್ನು ಹಾರಿಸಿದ್ದಾರೆ.



