ಮೂಡಿಗೆರೆ ಟಿಎಪಿಸಿಎಂಎಸ್ ಮತ್ತು ಎಪಿಎಂಸಿ ಸೇರಿದಂತೆ ಸಹಕಾರಿ ಸಂಸ್ಥೆಗಳು ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದು ರೈತರ ಮುಖಂಡ ಹಸಿರು ಸೇನೆ ಜಿಲ್ಲಾ ಸಂಚಾಲಕ ರಮೇಶ್ಗೌಡ ದಾರದಹಳ್ಳಿ ಆಗ್ರಹಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಅನೇಕ ಹಿರಿಯರು ಕಟ್ಟಿ ಬೆಳೆಸಿದ ಟಿಎಪಿಸಿಎಂಎಸ್ ಸಂಸ್ಥೆ ಹಿಂದಿನಿಂದಲೂ ಉತ್ತಮವಾಗಿ ಅಭಿವೃದ್ಧಿ ಕಾರ್ಯ ನಡೆಸಿಕೊಂಡು ಬಂದಿದೆ. ಆದರೆ ಈಗ ಸಂಘದಲ್ಲಿ ರಾಜಕೀಯ ಗುಂಪುಗಾರಿಕೆ ನಡೆಯುತ್ತಿದೆ. ಇದರಿಂದ ಅಭಿವೃದ್ದಿ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಪ್ರತಿ ವಾರ್ಷಿಕ ಮಹಾಸಭೆಯಲ್ಲಿ ಹಳೆಯ ಭ್ರಷ್ಟಾಚಾರದ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಅಲ್ಲದೇ ಕೇವಲ ಸನ್ಮಾನ ಮಾಡುವುದರಲ್ಲಿ ಸಮಯ ಕಳೆದಿದ್ದು ಬಿಟ್ಟರೆ ಸಂಘದ ಮೂಲ ಉದ್ದೇಶ ಮರೆತು ವಾರ್ಷಿಕ ಮಹಾಸಭೆಯ ಗಂಭೀರತೆ ಹಾಳು ಮಾಡುತ್ತಿದ್ದಾರೆಂದು ದೂರಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿರುವ ರೈತ ಮಾರುಕಟ್ಟೆ ಮೇಲ್ಬಾಗದ ಅಂತಸ್ತಿನ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಕಳೆದ 5 ವರ್ಷದಿಂದ ಗಮನ ಸೆಳೆಯಲಾಗುತ್ತಿದೆ. ಅಲ್ಲದೇ ರೈತ ಮಾರುಕಟ್ಟೆಯ ಎದುರಿನ ಹಳೆ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ಪುನರ್ ನಿರ್ಮಾಣ ಮಾಡಬೇಕೆಂದು 2024 ರ ವಾರ್ಷಿಕ ಮಹಾಸಭೆಯಲ್ಲಿ ತಿರ್ಮಾನಿಸಲಾಗಿದೆ. ಆದರೆ ಇದೂವರೆಗೂ ಆಡಳಿತ ಮಂಡಳಿ ಕ್ರಮ ವಹಿಸದೇ ಇರುವುದರಿಂದ ಸಂಘಕ್ಕೆ ಬರುವ ಆದಾಯಕ್ಕೆ ತೊಡಕುಂಟಾಗಿದೆ.
ಅಭಿವೃದ್ಧಿ ಶೂನ್ಯದಿಂದಾಗಿ ಮೂಡಿಗೆರೆ ಎಪಿಎಂಸಿ ಸಂಪೂರ್ಣ ಬಂದ್ ಆಗಿದೆ. ಇದರಿಂದ ಚುನಾಯಿತ ಮಂಡಳಿಯಾಗಿದ್ದ ಎಪಿಎಂಸಿ ಈಗ ಸರಕಾರ ಆಡಳಿತ ಅಧಿಕಾರಿಯನ್ನು ನೇಮಿಸಿದೆ. ಇದೇ ಪರಿಸ್ಥಿತಿ ಟಿಎಪಿಸಿಎಂಎಸ್ಗೆ ಬರುವ ಸೂಚನೆ ಕಾಣುತ್ತಿವೆ. ಹಾಗಾಗಿ ಬೇಡದ ವಿಚಾರಗಳಿಗೆ ಒತ್ತು ನೀಡದೇ ಅಭಿವೃದ್ಧಿ ಕಡೆ ಗಮನಹರಿಸಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಎನ್.ಎಸ್.ರಾಮಚಂದ್ರೇಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



