ಸರ್ಫಾಸಿ ಕಾಯ್ದೆಯ ಹೆಸರಿನಲ್ಲಿ ಬ್ಯಾಂಕುಗಳು ರೈತರ ತೋಟಗಳನ್ನು ಆನ್ ಲೈನ್ ಹರಾಜು ಹಾಕುತ್ತಿರುವ ಕ್ರಮವನ್ನು ರೈತ ಹಿತರಕ್ಷಣಾ ವೇದಿಕೆ ಸೇರಿದಂತೆ ವಿವಿಧ ರೈತ ಪರ ಸಂಘಟನೆಗಳು ಖಂಡಿಸಿವೆ.
ಈ ಬಗ್ಗೆ ಸೋಮವಾರ ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೂಡಿಗೆರೆ ತಾಲ್ಲೂಕು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಲಕ್ಷ್ಮಣಕುಮಾರ್ ಬ್ಯಾಂಕ್ ಗಳ ರೈತವಿರೋಧಿ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈಗಾಗಲೇ ಕೇಂದ್ರ ಸಚಿವರು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದು, ಕಾಫಿ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಸರ್ಫಾಸಿ ಕಾಯ್ದೆ ಅನ್ವಯವಾಗುವುದಿಲ್ಲ ಎಂದಿದ್ದರೂ ಸಹ ಅದನ್ನು ಲೆಕ್ಕಿಸದೇ ಬ್ಯಾಂಕ್ ಗಳು ದಿನನಿತ್ಯ ರೈತರ ಭೂಮಿಯನ್ನು ಹರಾಜು ಹಾಕುತ್ತಿವೆ ಎಂದು ಆರೋಪಿಸಿದ್ದಾರೆ.
ಕಮಿಷನ್ ಆಸೆಗಾಗಿ ಬ್ಯಾಂಕ್ ಮ್ಯಾನೇಜರ್ ಗಳು, ಭೂಮಾಪೀಯಾದವರು, ಏಜೆಂಟರುಗಳು ಸೇರಿ ರೈತರ ಭೂಮಿ ಹರಾಜು ಹಾಕಲು ಆಸಕ್ತಿ ತೋರಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ದಿನ ನಿತ್ಯ ರೈತರ ಭೂಮಿ ಹರಾಜಿನ ಪ್ರಕಟಣೆ ನೀಡುತ್ತಿದ್ದಾರೆ. ವಿಶೇಷವಾಗಿ ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ಸಾಲ ಮಾಡಿರುವ ರೈತರ ಭೂಮಿಯ ಹರಾಜಿಗೆ ಹೆಚ್ಚು ಆಸಕ್ತಿ ವಹಿಸಲಾಗುತ್ತಿದೆ. ಆನ್ ಲೈನ್ ಮೂಲಕ ಎಲ್ಲೋ ಇರುವ ಉದ್ದಿಮೆದಾರರು, ಭೂಮಾಫಿಯಾದವರು, ಭೂಗತ ಲೋಕದ ಪಾತಕಿಗಳು ಭೂಮಿಯನ್ನು ಹರಾಜು ಹಿಡಿಯುತ್ತಿದ್ದಾರೆ. ದೇವರುಂದ ಗ್ರಾಮದ ರೈತರೊಬ್ಬರಿಂದ ಶೇಕಡಾ 30 ರಷ್ಟು ಹಣ ಕಟ್ಟಿಸಿಕೊಂಡಿದ್ದರೂ ಸಹ ಮೂಡಿಗೆರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನವರು ಅವರ 80 ಎಕರೆ ತೋಟವನ್ನು ಹರಾಜು ಹಾಕಿದ್ದಾರೆ. ಸುಮಾರು ಎರಡೂವರೆ ಕೋಟಿ ಬೆಲೆಬಾಳುವ ಭೂಮಿಯನ್ನು ಕೇವಲ 80 ಲಕ್ಷಕ್ಕೆ ಹರಾಜು ಹಾಕಲಾಗಿದೆ. ಇಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ.
ಈ ಕ್ರಮವನ್ನು ತಕ್ಷಣ ನಿಲ್ಲಿಸಬೇಕು, ಕಾನೂನು ಬಾಹೀರವಾಗಿ ಹರಾಜು ಹಾಕಲು ಆಸಕ್ತಿ ತೋರುತ್ತಿರುವ ಬ್ಯಾಂಕ್ ಮ್ಯಾನೇಜರ್ ಗಳ ವಿರುದ್ಧ ಕ್ರಮ ಜರುಗಿಸಬೇಕು. ಈಗಾಗಲೇ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಸಂಸತ್ತಿನಲ್ಲಿ ಈ ಪ್ರಶ್ನೆಯನ್ನು ಎತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಒಂದು ಕಾಯ್ದೆಯಾಗಿ ರೂಪಿಸಬೇಕು. ತೋಟಗಾರಿಕಾ ಬೆಳೆಗಳು ಸರ್ಫಾಸಿ ಕಾಯ್ದೆಯಡಿ ಬರುವುದಿಲ್ಲ ಎಂದು ಕಾಯ್ದೆ ರೂಪಿಸಿ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಹೆಚ್.ಹೆಚ್.ದೇವರಾಜು ಮಾತನಾಡಿ ಬ್ಯಾಂಕುಗಳು ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ರೈತರ ಭೂಮಿ ಹರಾಜು ಹಾಕಲು ಮುಂದಾಗುತ್ತಿವೆ, ಈ ಕ್ರಮ ಖಂಡನೀಯ, ಕೇಂದ್ರ ಸರ್ಕಾರ ಈ ಬಗ್ಗೆ ತಕ್ಷಣ ಮಧ್ಯ ಪ್ರವೇಶಿಸಿ ರೈತರ ಹಿತ ಕಾಯಬೇಕೆಂದು ಆಗ್ರಹಿಸಿದ್ದಾರೆ.
ರೈತ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಸುರೇಂದ್ರ ಹ್ಯಾರಗುಡ್ಡೆ ಮಾತನಾಡಿ ಭೂ ಮಾಫಿಯಾದವರು ಮತ್ತು ಉದ್ಯಮಿಗಳು ಎಲ್ಲೋ ಕುಳಿತು ಭೂಮಿಯನ್ನು ಹರಾಜಿನಲ್ಲಿ ಪಡೆಯುತ್ತಿದ್ದಾರೆ ಅವರಿಗೆ ಕೃಷಿ ಮಾಡಬೇಕೆಂಬ ಆಸಕ್ತಿ ಇಲ್ಲ ಕೇವಲ ತೆರಿಗೆ ಉಳಿಸಲು ಮಾತ್ರ ಭೂಮಿಯನ್ನು ಕೈಗೊಳ್ಳುತ್ತಿದ್ದಾರೆ. ಈ ಪ್ರಕ್ರಿಯೆ ತಕ್ಷಣ ನಿಲ್ಲಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ರೇಣುಕಾರಾಧ್ಯ, ಗುರುಶಾಂತಪ್ಪ , ರೈತ ಹಿತರಕ್ಷಣಾ ವೇದಿಕೆಯ ಜಿ.ಯು. ಚಂದ್ರೇಗೌಡ ಗಬ್ಬಳ್ಳಿ, ಎಂ.ಕೆ. ರವಿ ಮಗ್ಗಲಮಕ್ಕಿ, ವಿಜಯಕುಮಾರ್ ದೇವರುಂದ ಮುಂತಾದವರು ಇದ್ದರು.



