ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಮುಸಲ್ಮಾನ ರೈತರ ಹೆಸರಿಗೆ ಜಮೀನು ಮಂಜೂರು ಮಾಡಿದರೆ ನೇಣಿಗೇರಿಸುತ್ತೇನೆಂಬ ಅಸಂವಿಧಾನಿಕ ಮಾತುಗಳನ್ನಾಡಿರುವ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಕಾಂಗ್ರೆಸ್ ಪಕ್ಷದಿಂದ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ SDPI ಪಕ್ಷದ ವತಿಯಿಂದ ಮೂಡಿಗೆರೆಯ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ರವರು ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನು ಪಡೆದು ಶಾಸಕನಾಗಿದ್ದೇನೆಂಬ ಜ್ಞಾನವಿಲ್ಲದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸರ್ಕಾರಿ ಅಧಿಕಾರಿಗಳಿಗೆ ಸಾಬ್ರಿಗೆ ಜಮೀನು ಮಂಜೂರು ಮಾಡಿದರೆ ನೇಣಿಗೇರಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿರುವುದಲ್ಲದೆ, ಬಹಿರಂಗವಾಗಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡಿಸುತ್ತಿರುವುದು ಸಂವಿಧಾನ ಬಾಹಿರವಾಗಿದೆ, ಈ ರೀತಿಯ ಹೇಳಿಕೆಗಳು ಸಮಾಜದ ಸಾರ್ವಜನಿಕರಲ್ಲಿ ಭಯದ ಮನಸ್ಥಿತಿಯನ್ನು ಉಂಟುಮಾಡುತ್ತದೆ, ಒಬ್ಬ ಸರ್ಕಾರಿ ಅಧಿಕಾರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿರುವುದರಿಂದ ಸರ್ಕಾರಿ ಅಧಿಕಾರಿಗಳಿಗೆ ಸರಿಯಾದ ಕೆಲಸ ಮಾಡಲು ಅಡ್ಡಿಯಾಗುತ್ತದೆ, ಆದ್ದರಿಂದ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ತಕ್ಷಣ ಶಾಸಕ ಸ್ಥಾನದಿಂದ ವಜಾಗೊಳಿಸಿ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶರೀಫ್ ಎಂ.ಯು ಮಾತನಾಡಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಹೇಳಿಕೆಯ ವೀಡಿಯೊ ಸಾರ್ವಜನಿಕ ವಲಯದಲ್ಲಿ ಹರುದಾಡುತ್ತಿದ್ದು ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು ಮತ್ತು ಶಾಸಕರ ನಡತೆ ಸಂವಿಧಾನದ ಆಚಾರಸಂಹಿತೆಗೆ ವಿರುಧ್ಧವಾಗಿದೆ, ಇದು ಮಾನವೀಯತೆ, ರೈತರ ಹಕ್ಕು ಮತ್ತು ಅಧಿಕಾರಿಗಳ ನ್ಯಾಯಯುತ ಆಡಳಿತಾತ್ಮಕ ವಿಚಾರಗಳನ್ನು ಕಸಿದಿಕೊಳ್ಳುವ ಪ್ರಯತ್ನವಾಗಿದೆ ಎಂದು ಹೇಳಿದರು.
ಎದ್ದೇಳು ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಗೌಸ್ ಮೋಹಿದ್ದೀನ್ ರವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯ ನಂತರ ರಮೇಶ್ ಬಂಡಿಸಿದ್ದೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಜ್ವಾನ್ ಹುಸೇನ್, ಜಿಲ್ಲಾ ಸಮಿತಿ ಸದಸ್ಯರಾದ ಖಾಲಿದ್ ಕೆ.ಪಿ, ಮೂಡಿಗೆರೆ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಸಂತೋಷ್ ಆನೆದಿಬ್ಬ, ಕ್ಷೇತ್ರ ಸಮಿತಿ ಸದಸ್ಯರಾದ ಅಲ್ತಾಫ್ ಬಿಳಗುಳ, ನಾಗೇಶ್ ಸಾಲುಮರ, ಆದಂ ಬಾಪುನಗರ, ಹನೀಫ್, ಫೈಜ್ ಹುಸೇನ್, ಹಿದಾಯತ್, ಜಾಮಿಯಾ ಮಸೀದಿಯ ಸದಸ್ಯರಾದ ಅಣ್ಣು ಮೊಹಮ್ಮದ್ ಇನ್ನಿತರರು ಉಪಸ್ಥಿತರಿದ್ದರು.



