ಬಂಡವಾಳಶಾಹಿ ಕೈಯಲ್ಲಿ ಪತ್ರಿಕೋಧ್ಯಮ ಸಿಲುಕಿರುವುದು ಸಮಾಜಕ್ಕೆ ಮಾರಕ ಎಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜೆ.ಎಂ.ರಾಜಶೇಖರ್ ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಕರ್ತವ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ನೈಜ ಸುದ್ದಿ ಮಾಡುವ ಪತ್ರಕರ್ತರನ್ನು ಹೋಲಿಸಿದರೆ ಇಂದು ಪತ್ರಿಕಾ ರಂಗ ಉದ್ಯಮವಾಗಿ ಬದಲಾಗಿದೆ. ಇದರಿಂದ ಕ್ರೀಯಾಶೀಲ ವರದಿಗಾರರು ಎಲೆಮರೆಕಾಯಿಯಂತೆ ಜೀವನ ನಡೆಸುವಂತಾಗಿದೆ. ಅಲ್ಲದೇ ಸರಕಾರ ಕೂಡ ಪತ್ರಕರ್ತರಿಗೆ ಯಾವುದೇ ಸವಲತ್ತು ಕೊಡುತ್ತಿಲ್ಲ. ಇದರಿಂದ ಪತ್ರಕರ್ತರು ಎಲ್ಲಾ ಸವಾಲು ಎದುರಿಸುವಂತಹ ಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಉದ್ಯಮಿ ಕೆ. ಮಂಚೇಗೌಡ ಮಾತನಾಡಿ, ಸಮಾಜದಲ್ಲಿ ನಡೆಯುವ ತಪ್ಪು ಬರೆದಾಗ ಪತ್ರಕರ್ತರು ವಿರೋಧಿಗಳ ರೀತಿ ಕಾಣುತ್ತಾರೆ. ಆದರೆ ಆ ಸುದ್ದಿ ಯಾಕೆ ಬರೆದಿದ್ದಾರೆಂದು ಮನವರಿಕೆ ಮಾಡಿಕೊಂಡು ಅದನ್ನು ಸರಿಪಡಿಸಿಕೊಂಡು ಹೋದರೆ ಈ ಸಮಾಜ ಉತ್ತಮ ಸ್ಥಿತಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಯುರೇಕಾ ಅಕಾಡೆಮಿ ಸ್ಥಾಪಕ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸರಿಯಾದ ದಿಕ್ಕಿನಲ್ಲಿ ನಡೆಯುವ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವ ಸಲುವಾಗಿ 4 ನೇ ಅಂಗವಾಗಿ ಪತ್ರಿಕಾರಂಗ ಕಾರ್ಯ ನಿರ್ವಹಿಸುತ್ತಿದೆ. ಪತ್ರಕರ್ತರಿಗೆ ಆಳುವ ಸರಕಾರಗಳು ರಕ್ಷಣೆ ನೀಡಬೇಕು. ಜತೆಗೆ ಸ್ಥಳೀಯ ಶಾಸಕರು ಇಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಂದೀಶ್ ಬಂಕೇನಹಳ್ಳಿ, ನೇತ್ರತಜ್ಞ ಬಿ.ಎಲ್.ರಂಗನಾಥಗೌಡ, ಶಿಕ್ಷಕ ಶಿವರಾಮೇಗೌಡ. ಸಮಾಜ ಸೇವಕ ಬಿ.ಜಯರಾಂ ನಲ್ಲಿತಾಯ, ವಕೀಲ ಸಿದ್ದಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾಥಿಗಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಿಜಿಎಸ್ ಶಾಲೆಯ ಸಾಹಿತ್ಯ ಮತ್ತು ಮಾನ್ವಿ, ದ್ವಿತೀಯ ಬಾಳೂರು ಐಜಿಆರ್ಎಸ್ ಶಾಲೆಯ ಸಂಚಯ್ ಮತ್ತು ಚಿರಂತನ್, ತೃತೀಯ ಸ್ಥಾನವನ್ನು ನಜರತ್ ಶಾಲೆ ಕೃಪನ್ ಮತ್ತು ಪ್ರಥಮ್ ಪಡೆದರು. ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಿಜಿಎಸ್ ಶಾಲೆ ಮೌಲ್ಯ, ದ್ವಿತೀಯ ಎಂಡಿಆರ್ಎಸ್ ಶಾಲೆಯ ಸೃಷ್ಟಿ, ತೃತೀಯ ಸ್ಥಾನ ನಳಂದ ಶಾಲೆಯ ಮಹಮ್ಮದ್ ಸಫ್ವಾನ್ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ತವ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲೆನಾಡು ಮಿಂಚು ಪತ್ರಿಕೆ ಸಂಪಾದಕ ಪ್ರಸನ್ನ ಕುಮಾರ್ ವಹಿಸಿದ್ದರು. ರೈತ ಮಹಿಳೆ ಅಶ್ವಿನಿ ಸಂತೋಷ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜೆ.ಎಸ್.ರಘು, ಜಿಲ್ಲಾ ಡಿಶಾ ಕಮಿಟಿ ಸದಸ್ಯ ಮನೋಜ್ ಹಳೆಕೋಟೆ, ಪಿಎಸ್ಐ ಶ್ರೀನಾಥ್ರೆಡ್ಡಿ ಮತ್ತಿತರರಿದ್ದರು.
ಪತ್ರಕರ್ತರಾದ ಪ್ರಸನ್ನ ಗೌಡಹಳ್ಳಿ, ಎಂ.ಹೆಚ್.ಅಮರನಾಥ್ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು.




