ಮಲೆನಾಡಿನಲ್ಲಿ ಕಾಡಾನೆಗಳ ಕಾಟದಿಂದ ರೈತರು ಭತ್ತ ಬೆಳೆಯದೇ ಗದ್ದೆಗಳನ್ನು ಪಾಳು ಬಿಟ್ಟಿರುವ ಸಂದರ್ಭದಲ್ಲಿ ಯುವ ರೈತರು ಭತ್ತದ ಕೃಷಿ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಬುಧವಾರ ಮೂಡಿಗೆರೆ ತಾಲ್ಲೂಕಿನ ಉಗ್ಗೇಹಳ್ಳಿ ಗ್ರಾಮದ ರೈತ ಶರತ್ ಎಂಬುವರ ಭತ್ತದ ಗದ್ದೆಯಲ್ಲಿ ಎನ್ಎಫ್ಎಸ್ಎನ್ಎಂ ಅಕ್ಕಿ ಯೋಜನೆಯಡಿಯಲ್ಲಿ ಯಾಂತ್ರಿಕ ಉಪಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಭತ್ತ ಬೆಳೆಯುವವರೇ ನಿಜವಾದ ಅನ್ನದಾತರು. ಯಂತ್ರದ ಮೂಲಕ ನಾಟಿ ಮಾಡುವುದರಿಂದ ಖರ್ಚು ಕಡಿಮೆ ಹಾಗೂ ಅಧಿಕ ಇಳುವರಿ ಪಡೆಯಬಹುದೆಂದು ಯುವ ರೈತರು ಭತ್ತದ ಕೃಷಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದರಿಂದ ಮುಂದಿನ ಪೀಳಿಗೆ ಕೂಡ ಉತ್ತಮ ಮಾರ್ಗದರ್ಶನ ನೀಡಿದಂತಾಗುತ್ತದೆ. ಈ ಕಾರಣದಿಂದ ಯಾಂತ್ರೀಕರಣ ಬಳಸಿ ಕೃಷಿ ಮಾಡಲು ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಕೃಷಿ ಇಲಾಖೆಯಿಂದ ಎನ್ಎಫ್ಎಸ್ಎನ್ಎಂ ಯೋಜನೆಯಡಿ ರೈತರಿಗೆ ಬಿತ್ತನೆ ಬೀಜ, ಸಾವಯವ ಗೊಬ್ಬರ, ಲಘು ಪೋಷಕಾಂಶಗಳು, ನ್ಯಾನೋ ಯೂರಿಯ, ನ್ಯಾನೋ ಡಿಎಪಿ ಮತ್ತು ಪೀಡೆನಾಶಕಗಳನ್ನು ಆಯ್ದ ರೈತರಿಗೆ ಉಚಿತವಾಗಿ ನೀಡಿ ಯಾಂತ್ರಿಕೃತ ಭತ್ತದ ನಾಟಿಗೆ ಪ್ರೋತ್ಸಾಹಿಸುತ್ತಿದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕಿ ಸುಜಾತ ಮಾತನಾಡಿ, ಮಲೆನಾಡಿನಲ್ಲಿ ಭತ್ತದ ಬಿತ್ತನೆ ಕ್ಷೇತ್ರ, ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ರೈತರು ಇದರ ಬಗ್ಗೆ ಗಮನಹರಿಸಿ ಕೃಷಿ ಇಲಾಖೆಯ ಸಹಯೋಗದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಇಲಾಖೆಯಿಂದ ಉಚಿತವಾಗಿ ವಿತರಿಸುವ ಬಿತ್ತನೆ ಬೀಜ ಹಾಗೂ ಪರಿಕರ ಬಳಸಿಕೊಂಡು ಯಾಂತ್ರಿಕೃತ ನಾಟಿಯ ಮೂಲಕ ಭತ್ತದ ಕ್ಷೇತ್ರವನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು.
ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ರೈತ ಉತ್ಪಾದಕ ಸಂಘದ ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ಕೃಷಿಕ ಸಮಾಜದ ಎಚ್.ಬಿ.ಜಗನ್ನಾಥ್, ಕೆಡಿಪಿ ಸದಸ್ಯ ಸುರೇಂದ್ರ ಉಗ್ಗೇಹಳ್ಳಿ, ಸಹಾಯಕ ಕೃಷಿ ನಿರ್ದೇಶಕಿ ಎಚ್.ಎನ್.ಸುಮ, ಉಪಕೃಷಿ ನಿರ್ದೇಶಕ ವೆಂಕಟೇಶ್ ಚವ್ಹಾಣ್ ಮತ್ತಿತರರಿದ್ದರು.



