ಕಾಫೀಯಲ್ಲಿ ಹೊಸ, ಹೊಸ ತಳಿಗಳ ಆವಿಷ್ಕಾರವನ್ನು ಕಾಫಿ ಸಂಶೋಧನ ಕೇಂದ್ರ ನಿರಂತರವಾಗಿ ಮಾಡುತ್ತಿರುತ್ತದೆ.
ಅದರಂತೆ ಕಾಫಿ ಮಂಡಳಿ ಹೊಸದಾಗಿ F 01 ಎಂಬ ವಿಶಿಷ್ಟ ತಳಿಯನ್ನು ಅವಿಷ್ಕರಿಸಿದೆ. ಎಲ್ಲಾ ಬೆಳೆಗಾರರಿಗೆ F 01 ತಳಿಯ ಬಗ್ಗೆ ಆಸಕ್ತಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ನರ್ಸರಿಯವರು ನಮ್ಮಲ್ಲಿ F 01ತಳಿಯ ಗಿಡಗಳು ಮಾರಾಟಕ್ಕಿವೆ ಎಂದು ಹೇಳಿ ಬೆಳೆಗಾರರನ್ನು ವಂಚಿಸುತ್ತಿದ್ದಾರೆ.
ಇಲ್ಲಿಯವರೆಗೆ F 01ತಳಿಯ ಗಿಡಗಳು ಯಾವುದೇ ನರ್ಸರಿಗಳಿಗೆ ಬೀಜದ ರೂಪದಲ್ಲಿ ಕಾಫೀ ಮಂಡಳಿಯಿಂದ ನೀಡಿರುವುದಿಲ್ಲ.
ಈ ತಳಿಯು ಟಿಸ್ಯುಕಲ್ಚರ್ ಹಂತದಲ್ಲಿದ್ದು, ಇನ್ನೂ ಅದನ್ನು ಗಿಡಗಳ ರೂಪದಲ್ಲಿ ರೈತರಿಗೆ ವಿತರಣೆ ಮಾಡಲು ಕಾಫಿ ಮಂಡಳಿ ಅಥವಾ ಕಾಫಿ ಸಂಶೋಧನಾ ಕೇಂದ್ರ ಮುಂದಾಗಿಲ್ಲ.
ಆದರೆ ಕೆಲವು ನರ್ಸರಿಯವರು ಬೇರೆ ತಳಿಯ ಗಿಡಗಳನ್ನೇ F 01ತಳಿಯ ಗಿಡಗಳು ಎಂದು ಹೇಳಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇದರಿಂದ ರೈತರು ಮೋಸಹೋಗಬಾರದೆಂದು ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದು, ಬೆಳೆಗಾರರು ಈ ಬಗ್ಗೆ ಎಚ್ಚರದಿಂದ ಇರಬೇಕೆಂದು ಮನವಿ ಮಾಡಿದ್ದಾರೆ.



