ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಮೂಡಿಗೆರೆ ತಾಲ್ಲೂಕಿನ ಬಿಳಗುಳ ಗ್ರಾಮದಲ್ಲಿ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಶಾಸಕಿ ನಯನ ಮೋಟಮ್ಮ ನೆರೆವೇರಿಸಿದರು. ತಹಸೀಲ್ದಾರ್ ಶ್ರೀಮತಿ ಅಶ್ವಿನಿ.ಎನ್.ರವರು ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೆರೆ ಹಸ್ತಾಂತರ ಹಾಗೂ ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟಿನ, ಟ್ರಸ್ಟಿ ಯಾದ ಪ್ರಶಾಂತ್ ಚಿಪ್ರಗುತ್ತಿ ಅವರು ಮಾತನಾಡುತ್ತಾ ನದಿ ಕೆರೆಗಳು ಜಗತ್ತಿನ ಜೀವನಾಡಿ ಬಹುತೇಕ ನಾಗರಿಕತೆಗಳು ನದಿ ಪಾತ್ರದಲ್ಲಿ ಹುಟ್ಟಿದ್ದನ್ನು ನಾವು ನೋಡುತ್ತೇವೆ. ನದಿ ಕೆರೆಗಳು ರಾಜರು ಮಹಾರಾಜರ ಕಾಲದಿಂದಲೂ ನಮ್ಮ ರೈತರಿಗೆ ಅನುಕೂಲದ ಜೊತೆಗೆ ದೇಶದ ಆರ್ಥಿಕತೆಯನ್ನು ಬಲಪಡಿಸಿಕೊಂಡು ಬಂದಿದೆ.

ನೀರು ಇದ್ದರೆ ಜೀವನ ಇದನ್ನ ಅರಿತ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನಮ್ಮ ರಾಜ್ಯದಲ್ಲಿ ಸಾವಿರಾರು ಕೆರೆಗಳಿಗೆ ಅವರು ಮರುಜೀವ ನೀಡಿ ಜನರ ಬದುಕನ್ನು ಹಾಸನಾಗಿ ಮಾಡಿದ್ದಾರೆ, ಹಾಗೂ ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆಯನ್ನು ಕೊಟ್ಟಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹೆಗ್ಗಡೆಯವರು ಸುಮಾರು 28,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ಶಿಷ್ಯವೇತನವನ್ನು ನೀಡಿ ಲಕ್ಷಾಂತರ ವಿದ್ಯಾರ್ಥಿಗಳ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ದೇಶಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟ ಹೆಗ್ಗಡೆಯವರಿಗೆ ನೋಬಲ್ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೆರೆ ಸಮಿತಿಯ ಅಧ್ಯಕ್ಷರು ಆದ ಪ್ರಶಾಂತ್ ಬಿಳಗುಳ ರವರು ಧರ್ಮಸ್ಥಳ ಕ್ಷೇತ್ರದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಜ್ಮಾ ಬೇಗಂ ರವರು ಶುಭಹಾರೈಸಿದರು. ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರರವರು ಯೋಜನೆಯ ಕಾರ್ಯ ವೈಖರಿಗಳ ಮಾಹಿತಿಯನ್ನು ನೀಡಿದರು. ಶಿವಣ್ಣ ಅವರು ಮಾತನಾಡಿ ಬಿಳಗುಳದಲ್ಲಿ ಕೆರೆ ಆದದ್ದು ಸಂತೋಷ ತಂದಿದೆ ಎಂದರು.



