ಪತ್ನಿಯನ್ನು ಕೊಂದು ಕೊಳವೆ ಬಾವಿಯಲ್ಲಿ ಹೂತಿಟ್ಟಿದ್ದ ಕಿರಾತಕನೊಬ್ಬನನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ಹೆಂಡತಿ ಕೊಂದು ಕೊಳವೆ ಬಾವಿಗೆ ಹಾಕಿ ದಫನ್ ಮಾಡಿ ದೇವರಿಗೆ ಮೂರು ಪ್ರಾಣಿ ಬಲಿ ನೀಡಿ, ಕಬ್ಬಿಣದ ತಗಡಿಗೆ ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು, ಕೇಸ್ ಪತ್ತೆ ಹಚ್ಚುವಲ್ಲಿ ಪೊಲೀಸರು ವೈಫಲ್ಯ ಆಗಬೇಕು, ಕೋರ್ಟಿನಲ್ಲಿ ಕೇಸ್ ನಿಲ್ಲಬಾರದು ಎಂದು ಬರೆದು ಹೆಂಡತಿ ಫೋಟೋವನ್ನ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಆರೋಪಿ ಪತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತಳನ್ನ 28 ವರ್ಷದ ಭಾರತಿ ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಹೆಂಡತಿಯನ್ನ ಕೊಂದಿದ್ದ ಗಂಡ ವಿಜಯ್ ಯಾರಿಗೂ ತಿಳಿಯಂತೆ ತಮ್ಮ ತೋಟದ ಕೊಳವೆ ಬಾವಿಯಲ್ಲಿ ಆಕೆಯ ಶವವನ್ನು ಹೂತಿದ್ದನು. ಯಾರಿಗೂ ಅನುಮಾನ ಬಾರದಿರಲಿ ಎಂದು ಆತನೇ ಹೋಗಿ ನನ್ನ ಪತ್ನಿ ಮಾನಸಿಕ ಅಸ್ವಸ್ಥೆ. ಎಲ್ಲೋ ಹೋಗಿದ್ದಾಳೆ. ಹುಡುಕಿಕೊಡಿ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಆದ್ರೆ, ಒಂದೂವರೆ ತಿಂಗಳ ಹಿಂದೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯ ಬೆನ್ನು ಬಿದ್ದಿದ್ದರು. ಹುಡುಗಿಯ ಪೋಷಕರು ಕೂಡ ನಮಗೆ ನಮ್ಮ ಮಗಳನ್ನ ಹುಡುಕಿಕೊಂಡು ಎಂದು ಕೈಮುಗಿದಿದ್ದರು. ಇದೀಗ ಪೊಲೀಸರ ತನಿಖೆಯಿಂದ ಹಂತಕ ಆಕೆಯ ಗಂಡನೇ ಎಂಬುದು ಸಾಬೀತಾಗಿದೆ. ಗಂಡ ವಿಜಯ್, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಭಾರತಿ ತನ್ನ ಅಜ್ಜಿ ನೋಡಲು ಶಿವಮೊಗ್ಗಕ್ಕೆ ಹೋದವಳು ವಾಪಸ್ಸು ಬಾರದೇ ಕಾಣೆಯಾಗಿದ್ದಾಳೆ ಎಂದು ಸೆಪ್ಟೆಂಬರ್ 5ರಂದು ವಿಜಯ್ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಪೋಲೀಸರು ತನಿಖೆ ಕೈಗೊಂಡಿದ್ದರು.
ಈ ನಡುವೆ ಸುಮಾರು ಒಂದೂವರೆ ತಿಂಗಳ ಬಳಿಕ ಅಕ್ಟೋಬರ್ 13 ರಂದು ಭಾರತಿಯ ತಾಯಿ ಎಮ್ಮೆದೊಡ್ಡಿ ಪ್ರದೇಶದ ಪರದೇಶಿಹಾಳ್ ನಿವಾಸಿ ಲಲಿತಮ್ಮ ಅವರು ಕಡೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನನ್ನ ಮಗಳು ಭಾರತಿಯನ್ನ 6 ವರ್ಷಗಳ ಹಿಂದೆ ಆಲಘಟ್ಟದ ವಿಜಯಕುಮಾರ್ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದೆವು. ನಂತರ ಹಲವಾರು ಬಾರಿ ವರದಕ್ಷಿಣೆ ವಿಚಾರವಾಗಿ ಭಾರತಿಗೆ ಹೊಡೆದು ಹಿಂಸೆ ನೀಡಿದ್ದರು. ನನ್ನ ಮಗಳನ್ನು ಇವರು ಕೊಲೆ ಮಾಡಿದ್ದಾರೆ. ಎಂದು ಭಾರತಿಯ ಪತಿ ವಿಜಯ ಕುಮಾರ್, ಆತನ ತಂದೆ ಗೋವಿಂದಪ್ಪ ಹಾಗೂ ತಾಯಿ ತಾಯಮ್ಮ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಅಂತಿಮವಾಗಿ ದೂರು ನೀಡಿದ ವ್ಯಕ್ತಿಯೇ ತನ್ನ ಹೆಂಡತಿಯನ್ನು ಕೊಲೆ ಮಾಡಿ ಕಾಣೆಯಾಗಿರುವ ಬಗ್ಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದು ಆತನನ್ನು ಬಂಧಿಸಿದ್ದಾರೆ. ಜೊತೆಗೆ ಆತನ ತಂದೆ ತಾಯಿಯನ್ನೂ ಬಂಧಿಸಲಾಗಿದೆ.
ಆರೋಪಿಗಳನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಕೊಲೆ ಮಾಡಿದ ನಂತರ ಹೆಂಡತಿಯ ಮೃತ ದೇಹವನ್ನು ತನ್ನದೇ ಜಮೀನಿನಲ್ಲಿ ಹಿಂದೆ ತೆಗೆಸಿ ನೀರು ಬಾರದೇ ಹಾಗೆಯೇ ಮುಚ್ಚದೇ ಬಿಟ್ಟಿದ್ದ ಕೊಳವೆ ಬಾವಿಗೆ ಹಾಕಿದ್ದಾರೆ ಎನ್ನಲಾಗಿದೆ. ಮಂಗಳವಾರ ಕಡೂರು ಪೊಲೀಸರು ಮೃತದೇಹ ಹಾಕಿದ್ದಾರೆ ಎನ್ನಲಾದ ಕೊಳವೆ ಬಾವಿ ಮುಂತಾದೆಡೆ ಮಹಜರು ನಡೆಸಿದರು. ಮೃತದೇಹವನ್ನು ಹೊರತೆಗೆಯಲು ಅಗತ್ಯ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.



