ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ರಸ್ತೆಗೆ ಅಡ್ಡಲಾಗಿ ನಿಂತ ಕಾರಣದಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಆತಂತಕ್ಕೆ ಒಳಗಾದ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ 9.45 ರ ಸುಮಾರಿಗೆ ಮರವೊಂದನ್ನು ಮುರಿದು ರಸ್ತೆಗೆ ಬೀಳಿಸಿ ಅದರ ಸೊಪ್ಪನ್ನು ತಿನ್ನುತ್ತಾ ರಸ್ತೆ ಮಧ್ಯೆ ಕಾಡಾನೆ ನಿಂತಿದೆ. ಚಾರ್ಮಾಡಿ ಘಾಟಿಯ 2ನೇ–3ನೇ ತಿರುವಿನ ಮಧ್ಯೆ ರಸ್ತೆ ಮೇಲೆ ಕಾಡಾನೆ ಯಾವುದೇ ಆತಂಕವಿಲ್ಲದೆ ರಾಜಗಾಂಭೀರ್ಯದಿಂದ ನಿಂತಿತ್ತು. ಇದರಿಂದಾಗಿ ಸುಮಾರು ಒಂದು ತಾಸಿಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು.
ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದ್ದು ಸಂಚಾರ ಸಂಪೂರ್ಣ ಸ್ಥಗಿತ ವಾಗಿತ್ತು. ಮೊಬೈಲ್ ನೆಟ್ವರ್ಕ್ ಇಲ್ಲದೆ ಮಾಹಿತಿ ನೀಡಲು ಸಾರ್ವಜನಿಕರು ಪರದಾಡಬೇಕಾಯಿತು. ನಂತರ ಕಾಡಾನೆ ತಾನಾಗಿಯೇ ರಸ್ತೆಯಿಂದ ತೆರಳಿದ್ದು, ನಂತರ ಸಂಚಾರ ಪುನರಾರಂಭವಾಗಿದೆ.
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಪದೇಪದೇ ಈ ಆನೆ ಕಾಣಿಸಿಕೊಳ್ಳುತ್ತಿದೆ. ಕೆಲ ತಿಂಗಳಿನಿಂದ ಕಾಣಿಸಿಕೊಳ್ಳದ ಆನೆ ಮತ್ತೆ ಪ್ರತ್ಯಕ್ಷವಾಗಿದೆ.



