ಚಿಕ್ಕಮಗಳೂರು ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ ಮಾ.28 ಮತ್ತು 29 ರಂದು ನಗರದ ಹೊರವಲಯದ ಸಂಜೀವಿನಿ ಶಾಲಾವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರ ಪ್ರದೇಶದವರಿಗೆ ಸಂಜೀವಿನಿ ಶಾಲೆಯ ಆವರಣದಲ್ಲಿ ಮತ್ತು ಗ್ರಾಮಾಂತರ ಪ್ರದೇಶದವರಿಗೆ ಸಖರಾಯಪಟ್ಟಣ ಮತ್ತು ಹುಕ್ಕುಂದದಲ್ಲಿ ನಡೆಯಲಿದೆ ಎಂದು ಹೇಳಿದರು.
ಮಾ.28 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಮ್ಮ ಕಾರ್ಯ ಪದ್ಧತಿ ಕುರಿತು ಪ್ರಶಿಕ್ಷಣ ಅಭಿಯಾನದ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು ಮಾತನಾಡಲಿದ್ದಾರೆ ಎಂದರು.
ಮಧ್ಯಾಹ್ನ 2-30ಕ್ಕೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಬಿಜೆಪಿ ಇತಿಹಾಸ ಮತ್ತು ವಿಕಾಸ ಕುರಿತು, ಸಂಜೆ 4 ಗಂಟೆಗೆ ಸಾಮಾಜಿಕ ಜಾಲತಾಣ ಕುರಿತು ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣ ಸಂಚಲಕ ಶಂಕರ್ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಸಂಜೆ 5 ಗಂಟೆಗೆ ನಮ್ಮ ಕಾರ್ಯ ವಿಸ್ತರಣೆ ಮತ್ತು ದೃಷ್ಟಿಕೋನ ಕುರಿತು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾತ್ರಿ 8 ಗಂಟೆಗೆ ಸೈದ್ದಾಂತಿಕ ಅಡಿಪಾಯ ಕುರಿತು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡುವರು ಎಂದು ಹೇಳಿದರು.
ಮಾ.29 ರಂದು ಬೆಳಿಗ್ಗೆ 8 ಗಂಟೆಗೆ ಮತಗಟ್ಟೆ ನಿರ್ವಹಣೆ ಕುರಿತು ಪ್ರಕೋಷ್ಟಗಳ ಸಂಚಾಲಕ ಸಿ.ಆರ್.ಪ್ರೇಮಕುಮಾರ್ ಮಾತನಾಡಲಿದ್ದು, ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಪ್ರಶಿಕ್ಷಣ ಮಹಾ ಅಭಿಯಾನ ಮೂರು ವರ್ಷಗಳಿಗೊಮ್ಮೆ ನಡೆಯಲಿದ್ದು, ಈ ಶಿಬಿರದಲ್ಲಿ ಮತಗಟ್ಟೆ ಅಧ್ಯಕ್ಷರುಗಳು, ಬಿಎಲ್ಎ-2, ನಗರ ಮಂಡಲ, ಜಿಲ್ಲಾ ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ರುದ್ರೇಶ್, ಜಯರಾಂ, ಕೌಶಿಕ್, ರಾಜೀವ್, ಕೆ.ಪಿ.ಮಧು, ಬಸವರಾಜ್ ಉಪಸ್ಥಿತರಿದ್ದರು.



