ಪ್ರತಿವರ್ಷ ಜಮೀನಿನಲ್ಲಿ ಮಣ್ಣಿನ ಪರೀಕ್ಷೆ ನಡೆಸಿ ಕೊರತೆ ಕಂಡು ಬಂದ ಪೋಷಕಾಂಶಗಳನ್ನು ಮಾತ್ರ ನೀಡುವುದು ಅಗತ್ಯ ಎಂದು ಕೃಷಿ ತಾಂತ್ರಿಕ ಸಲಹೆಗಾರ ಸುನೀಲ್ ತಮಗಾಳೆ ತಿಳಿಸಿದರು.
ಕೊಪ್ಪ ತಾಲ್ಲೂಕಿನ ತೆಂಗಿನಮನೆ ಬಳಿಯ ಬೆಳವಾಡಿ ಸುರೇಶ್ ಕೃಷಿ ಕ್ಷೇತ್ರದಲ್ಲಿ ಇಂಡಿಯನ್ ಪೆಪ್ಪರ್ ಲೀಗ್ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದ ಅವರು, ಮಳೆ ನಿಂತ 2 ಅಥವಾ 3 ತಿಂಗಳಲ್ಲಿ ಜಮೀನಿನ ನಿರ್ದಿಷ್ಟ ಭಾಗದಿಂದ ಮಣ್ಣು ತೆಗೆದು ಪರೀಕ್ಷೆ ನಡೆಸಿ ಅಗತ್ಯಕ್ಕೆ ತಕ್ಕಷ್ಟು ಪೋಷಕಾಂಶ ನೀಡಬೇಕು. ಮಣ್ಣು ಪರೀಕ್ಷೆ ನಡೆಸಿದ ಜಾಗದ ಬಳಿಯಲ್ಲಿನ ಕಾಫಿ ಗಿಡದ ನಾಲ್ಕೂ ಬದಿಗಳಿಂದ 40 ಎಲೆಗಳನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕು. ಆಗ ಮಾತ್ರ ನಿಖರವಾದ ಫಲಿತಾಂಶ ಲಭ್ಯವಾಗಲಿದೆ. ಅಕ್ಟೋಬರ್ 15ರೊಳಗೆ ಗೊಬ್ಬರ ನವೆಂಬರ್ ತಿಂಗಳಲ್ಲಿ ಸುಣ್ಣ ನೀಡುವುದು ಸೂಕ್ತ ಎಂದರು,
ಸಸ್ಯಮಿತ್ರ ನರ್ಸರಿ ಮಾಲೀಕ ಶಶಿಧರ್ ಸಕ್ರೆಮಕ್ಕಿ ಮಾತನಾಡಿ, ನರ್ಸರಿಯಲ್ಲಿ ಬುಟ್ಟಿ ತುಂಬಿಸಲು ಸುಡುಮಣ್ಣು ಬಳಕೆ ಮಾಡುತ್ತೇವೆ. ಇದರಿಂದ ಗಿಡಗಳಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ. ನರ್ಸರಿಯಲ್ಲಿ ಗಿಡ ಬೆಳೆಸುವ ಮುನ್ನ ಮೂಲ ತಳಿಯ ಗುಣಮಟ್ಟದ ಆಯ್ಕೆಗೆ ಹೆಚ್ಚಿನ ಗಮನ ನೀಡಬೇಕು. ನರ್ಸರಿ ಒಳಗೆ ನೀರಿನ ತೇವಾಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ಕಾಳುಮೆಣಸು ಕಡ್ಡಿಗಳನ್ನು ಬುಟ್ಟಿಯಲ್ಲಿ ತುಂಬಿಸುವ ಮುನ್ನ ಶೀಲೀಂದ್ರ ನಾಶಕದಲ್ಲಿ ಅದ್ದಬೇಕು. ಬುಟ್ಟಿಗೆ ಸುಡುಮಣ್ಣಿನ ಜೊತೆಗೆ ಕಾಡುಮಣ್ಣು ಬೆರಸಬಹುದು. ನರ್ಸರಿಯಿಂದ ಗಿಡಗಳನ್ನು ನೇರವಾಗಿ ತೋಟಕ್ಕೆ ತೆಗೆದುಕೊಂಡು ಹೋಗಿ ನಾಟಿ ಮಾಡಬೇಕು. ಮೂರು ನಾಲ್ಕು ಕಡೆಗಳಲ್ಲಿ ಗಿಡಗಳನ್ನು ಇಟ್ಟು ಮತ್ತೆ ನಡೆವುದರಿಂದ ಫಂಗಸ್ ತಗಲುವ ಸಾಧ್ಯತೆ ಇದೆ ಎಂದರು.
ಮಣ್ಣು ಪರೀಕ್ಷೆ ಮಾದರಿ ತೆಗೆಯುವ ‘ಆಗಾರ್’ ಎಂಬ ವಿಶಿಷ್ಟ ಸಾಧನ ಹಾಗೂ ಕಾಫಿ ಗಿಡದ ಕೆಳಭಾಗದಿಂದ ಮಂಜಿನ ರೂಪದಲ್ಲಿ ಔಷಧಿ ಸಿಂಪಡಣೆ ನಡೆಸುವ ವಿಶಿಷ್ಟ ಯಂತ್ರದ ಪ್ರಾತ್ಯಕ್ಷಿತೆ ನಡೆಸಲಾಯಿತು.ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ರೈತರು ಭಾಗವಹಿಸಿದ್ದರು.
ಇಂಡಿಯನ್ ಪೆಪ್ಪರ್ ಲೀಗ್ ಅಧ್ಯಕ್ಷ ಎಚ್.ವಿ.ಪ್ರದೀಪ್ ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ಕೆ.ಎಸ್.ಸತ್ಯಪ್ರಕಾಶ್, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ನಿರ್ದೇಶಕರುಗಳಾದ ಶಿರಾಂಕ್ ಹೆಗ್ಡೆ,ಕೆ.ಸಿ.ಮಧುಕುಮಾರ್, ಎಚ್.ಎಂ.ಚೆನ್ನಕೇಶವ, ಶ್ರೀಕಾಂತ್ ಭಾಗವಹಿಸಿದ್ದರು.



