ಆಲ್ದೂರು ಪಟ್ಟಣದ ಬಿಜೆಪಿ ಆಲ್ದೂರು ಮಂಡಲ ಕಚೇರಿ ಕಾರ್ಯಾಲಯದಲ್ಲಿ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು.
ಸಂಸ್ಥಾಪನ ದಿನದ ಅಂಗವಾಗಿ ಕಚೇರಿಯನ್ನು ಶುದ್ಧೀಕರಿಸಿ, ಅಲಂಕರಿಸಿ ಪಕ್ಷದ ಧ್ವಜಾರೋಹಣ ವನ್ನು ನಡೆಸಲಾಯಿತು.
ಬಳಿಕ ಮಾತನಾಡಿದ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ದೇಶ ಮೊದಲು ಎಂಬ ಘೋಷವಾಕ್ಯದೊಂದಿಗೆ ಪ್ರತಿಯೊಬ್ಬ ಕಾರ್ಯಕರ್ತರನ್ನು ಕೇಂದ್ರಬಿಂದುವನ್ನಾಗಿಸಿ ಪರಿಶ್ರಮದ ಮೂಲಕ ಪ್ರಜಾಪ್ರಭುತ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಇಂದು ಹೊರ ಹೊಮ್ಮಿದ್ದು, ಪ್ರಪಂಚವೇ ಭಾರತವನ್ನು ತಿರುಗಿ ನೋಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದುಡಿಯುತ್ತಿದ್ದಾರೆ.
ಅದೇ ರೀತಿಯಲ್ಲಿ ಪಕ್ಷದಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತರು ಮುಖಂಡರಂತೆ ಪ್ರತಿಯೊಬ್ಬ ಮುಖಂಡರು ಸಾಮಾನ್ಯ ಕಾರ್ಯಕರ್ತರಂತೆ ಪಕ್ಷದ ಸೈದ್ಧಾಂತಿಕ ನಿಲುವುಗಳನ್ನು ಗೌರವಿಸಿ ಚಿಂತಿಸಿದಾಗ ಇನ್ನಷ್ಟು ಪಕ್ಷ ಬೆಳೆಯುತ್ತದೆ ಹಾಗೂ ಮುಂಬರುವ ಸ್ಥಳೀಯ ಆಡಳಿತ ಚುನಾವಣೆಗಳು, ರಾಜ್ಯ ಮತ್ತು ಕೇಂದ್ರದ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಸದೃಢ ಆಗುವುದಿಲ್ಲ ಎಲ್ಲರೂ ಕೆಲಸ ಮಾಡಬೇಕಿದೆ ಎಂದು ತಿಳಿಸಿ ಸಂಸ್ಥಾಪನ ದಿನಾಚರಣೆಯ ಶುಭಾಶಯ ಕೋರಿದರು.
ಎಲ್ಲರೂ ಸಿಹಿಯನ್ನು ಹಂಚಿ ಸಂಭ್ರಮವನ್ನು ವಿನಿಮಯ ಮಾಡಿಕೊಂಡರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂಪಾ ಜಗದೀಶ್, ಮಂಡಲ ಉಪಾಧ್ಯಕ್ಷೆ ಭವ್ಯ ನಟೇಶ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಆನಿಗನಹಳ್ಳಿ, ಬಿಜೆಪಿ ಹೋಬಳಿ ಅಧ್ಯಕ್ಷ ನಾಗೇಶ್ ಭೂತನ ಕಾಡು, ಉಪಾಧ್ಯಕ್ಷ ಮಿಥುನ್ ಹಳಿಯೂರು, ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರತಿಭಾ ನವೀನ್, ಮಂಡಲದ ಎಸ್ಸಿ ಮೋರ್ಚಾ ಅಧ್ಯಕ್ಷ ನಾಗೇಶ್ ಡಿಜೆ,ಯುವ ಮೋರ್ಚಾ ಪದಾಧಿಕಾರಿ ಆತ್ಮಿಕ್ ಗೌಡ, ಕಾರ್ಯಕರ್ತರಾದ ಮಹೇಂದ್ರ, ಸುನಿಲ್, ಭಾಗವಹಿಸಿದ್ದರು.



