ಸರ್ಫೇಸಿ ಕಾಯಿದೆ ಕುರಿತಾಗಿ ಜನಪ್ರತಿನಿಧಿಗಳು ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಬೇಕು. ಸರ್ಫೇಸಿ ಕಾಯಿದೆ ವಿಚಾರವಾಗಿ ಜನಪ್ರತಿನಿಧಿಗಳು ನೀಡಿದ ಭರವಸೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಕೆ. ಲಕ್ಷ್ಮಣಕುಮಾರ್ ಬೇಸರ ವ್ಯಕ್ತಪಡಿಸಿದರು.
ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾಫಿ ಬೆಳೆಗಾರರ ಸಂಘ, ಜಿಲ್ಲಾ ಸಣ್ಣ ಬೆಳೆಗಾರರ ಸಂಘ, ಬೆಳೆಗಾರರ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರಸಭೆ ಆವರಣದಲ್ಲಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇಳೆ ಅವರು ಮಾತನಾಡಿದರು.
ಇತ್ತೀಚೆಗೆ ದಿಲ್ಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರ ಜತೆ ಸಭೆ ನಡೆಸಿದ ವೇಳೆ ಬೆಳೆಗಾರರ ಜಮೀನು ಹರಾಜು ಮಾಡದಂತೆ ಸೂಚನೆ ನೀಡಿದ್ದರು. ಆದರೂ ಬೆಳೆಗಾರರಿಗೆ ನೋಟಿಸ್ ಬರುವುದು ತಪ್ಪಿಲ್ಲ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುವ ಸರಕಾರ, ರೈತರ ಭೂಮಿ ಹರಾಜು ಹಾಕುವುದನ್ನು ತಪ್ಪಿಸಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಮುಂದಿನ ದಿನಗಳಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುವುದು. ಸಂಸದರು ತಮ್ಮ ಕೈಯಲ್ಲಿ ಆಗುತ್ತದೆಯೋ, ಇಲ್ಲವೋ ಎಂಬುದನ್ನು ಬಹಿರಂಗವಾಗಿ ಹೇಳಿದರೆ ಬೇರೆ ದಾರಿ ಹುಡುಕಲು ಅನುಕೂಲವಾಗುತ್ತದೆ. ನಿಮ್ಮ ಪಕ್ಷ ಬಹಳ ಹಿಂದಿನಿಂದಲೂ ರೈತರ ಪರವಾಗಿಲ್ಲ, ಬಂಡವಾಳ ಶಾಹಿಗಳ ಪರವಾಗಿದೆ ಎಂಬುದು ಸಾಬೀತಾಗಿದೆ. ಹಿಂದಿನ ಸಂಸದರೂ ಇದೇ ಸುಳ್ಳು ಹೇಳಿಕೊಂಡು ಬಂದಿದ್ದರು. ಈಗಲೂ ಅದು ಮುಂದುವರಿದಿದೆ ಎಂದು ಲಕ್ಷ್ಮಣ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕೇರಳ ಮತ್ತು ತಮಿಳುನಾಡಿನಲ್ಲಿ ಕಾಫಿಯನ್ನು ಕೃಷಿ ವ್ಯಾಪ್ತಿಗೆ ತರಲಾಗಿದೆ ಹಾಗೆಯೇ ನಮ್ಮ ರಾಜ್ಯದಲ್ಲಿ ಕಾಫಿಯನ್ನು ಕೃಷಿ ಎಂದು ಪರಿಗಣಿಸಬೇಕು ಎಂದರು.
ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಉತ್ತಮ್ ಗೌಡ ಮಾತನಾಡಿ, ಸರ್ಫೇಸಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು. ಕಾನೂನು ಹೋರಾಟಕ್ಕೂ ಮುಂದಾಗಬೇಕು ಎಂದರು. ಕೆನರಾ ಬ್ಯಾಂಕ್ ರೈತರ ಮೇಲೆ ವಿಪರೀತ ದಬ್ಬಾಳಿಕೆ ಮಾಡುತ್ತಿದೆ. ಇದಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಕೆನರಾ ಬ್ಯಾಂಕ್ ನಲ್ಲಿರುವ ಎಫ್ಡಿಯನ್ನು ಬೇರೆ ಬ್ಯಾಂಕ್ ಗಳಿಗೆ ವರ್ಗಾಯಿಸುವ ಮೂಲಕ ಪೆಟ್ಟು ನೀಡಬೇಕು. ಬೆಳೆಗಾರರಿಗೆ ಬಾರೀ ಪ್ರಮಾಣದಲ್ಲಿ ಹೊಡೆತ ಬಿದ್ದರೂ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ ಸಂಗತಿ ಎಂದರ.
ಸರ್ಫೇಸಿ ಕಾಯ್ದೆಯನ್ನು ಹಗುರವಾಗಿ ತೆಗೆದುಕೊಳ್ಳುವುದು ಬೇಡ. ಬೆಳೆಗಾರರು ಬೀದಿಗಿಳಿದು ಪ್ರತಿಭಟಿಸಿದರೆ ಮರ್ಯಾದೆ ಹೋಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಇದಕ್ಕೂ ಮುನ್ನ ತಾಲ್ಲೂಕು ಕಛೇರಿಯಿಂದ ನಗರಸಭೆ ಅವರಣದಲ್ಲಿರುವ ಸಂಸದರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ರೈತ ಹೋರಾಟಗಾರ ಎಚ್.ಎಚ್.ದೇವರಾಜ್, ಸಾಮಾಜಿಕ ಗುರುಶಾಂತಪ್ಪ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್, ಹೋರಾಟಗಾರ್ತಿ ರಾಧಾ ಸುಂದರೇಶ್, ರೈತ ಮುಖಂಡ ಕುಮಾರ್, ಹೊಲದಗದ್ದೆ ಗಿರೀಶ್, ವನಶ್ರೀ ಲಕ್ಷ್ಮಣಗೌಡ, ಮಲ್ಲೇಶ್ ಸೇರಿದಂತೆ ಹಲವರು ಇದ್ದರು.



