ಕಪ್ಪೆಚಿಪ್ಪು ಹೆಕ್ಕಲು ಹೋಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ 10 ಜನ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇವರ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.
11 ಜನರ ಪೈಕಿ ನಿನ್ನೆ 10 ಮೃತದೇಹಗಳು ಸಿಕ್ಕಿದ್ದವು. ಆದರೆ ಒಬ್ಬರ ಬಗ್ಗೆ ಮಾತ್ರ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸ್ಥಳೀಯ ಮೀನುಗಾರ ಸಹಾಯದಿಂದ NDRF, ಕರಾವಳಿ ಕಾವಲು ಪಡೆ, ಆಗ್ನಿ ಶಾಮಕ ಹಾಗೂ ಸ್ಥಳೀಯರ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ.
ಉತ್ತರ ಕನ್ನಡದ ಭಟ್ಕಳ ತಟ್ಟೆ ಹಕ್ಕಲು ನದಿಯಲ್ಲಿ ಘನಘೋರ ದುರಂತ ನಡೆದುಹೋಗಿದೆ. ತಟ್ಟೆಹಕಲ್ಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಪಡುಶಿರಾಲಿ ಶಾರದಹೊಳೆಯ 14 ಜನ ನದಿಗೆ ಇಳಿದಿದ್ರು. 12 ಮಂದಿ ಮಹಿಳೆಯರು, ಇಬ್ಬರು ಪುರುಷರು ಕಪ್ಪೆಚಿಪ್ಪುಗಳನ್ನ ತೆಗೆಯುತ್ತಿದ್ರು. ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಒಂದಷ್ಟು ಕಪ್ಪೆ ಚಿಪ್ಪುಗಳನ್ನ ಆಯ್ದು ನದಿ ತಟದಲ್ಲಿ ಇರಿಸಿದ್ದರು. ಆದ್ರೆ ನದಿ ಒಡಲಿನಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದು ನದಿಗೆ ಇಳಿದವರು ಪ್ರಾಣ ಬಿಟ್ಟಿದ್ದಾರೆ. ಒಟ್ಟು 14 ಜನರ ಪೈಕಿ 10 ಮಂದಿ ಮೃತಪಟ್ಟಿದ್ದಾರೆ. ಓರ್ವ ಪುರುಷ ಸೇರಿ 9 ಮಹಿಳೆಯರು ಸಾವಿಗೀಡಾಗಿದ್ದು, ಮೂವರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಒಬ್ಬರಿಗಾಗಿ ತೀವ್ರ ಶೋಧ ಮುಂದುವರೆದಿದೆ.
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.



