ಮೂಡಿಗೆರೆ ಸಮೀಪದ ಬೀಜುವಳ್ಳಿಯಿಂದ ಕುನ್ನಹಳ್ಳಿಗೆ ಸಾಗುವ ರಸ್ತೆಯ ಕೆಲ ಭಾಗಗಳು ಕೆರೆಯಂತಾಗಿದ್ದು ಮಳೆಗಾಲದಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಮತ್ತು ನಿರ್ವಹಣೆ ಇಲ್ಲದೇ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ.
ಕುನ್ನಹಳ್ಳಿ ಹಳಸೆ ಮುಂತಾದ ಗ್ರಾಮಗಳಿಗೆ ಸಾಗುವ ಈ ರಸ್ತೆಯಲ್ಲಿ ಅಂಬೇಡ್ಕರ್ ನಗರದ ಸಮೀಪ ರಸ್ತೆಯಲ್ಲಿ ಸುಮಾರು 50 ಮೀಟರ್ ಉದ್ದಕ್ಕೂ ಕೆರೆಯಂತೆ ನೀರು ನಿಲ್ಲುತ್ತಿದೆ. ಇಲ್ಲಿ ನಿತ್ಯ ನೂರಾರು ಜನರು ಮತ್ತು ವಾಹನಗಳು ಸಂಚರಿಸುತ್ತವೆ. ಬಹುತೇಕ ಈ ಭಾಗದ ಕೂಲಿ ಕಾರ್ಮಿಕರು ನಡೆದುಕೊಂಡೇ ಹೋಗಬೇಕಾಗಿದೆ. ಆದರೆ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ವಿದ್ಯಾರ್ಥಿಗಳು ಸಾರ್ವಜನಿಕರು ರಸ್ತೆ ದಾಟಲು ಪರದಾಡುವಂತಾಗಿದೆ. ವಾಹನಗಳು ಸಾಗುವಾಗ ಗೊಚ್ಚೆ ನೀರು ದಾರಿಹೋಕರ ಮೇಲೆ ಎರಚುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ನಿತ್ಯ ಸಮಸ್ಯೆಯಾಗಿದೆ.
ಈ ಬಗ್ಗೆ ಸ್ಥಳೀಯ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯ ಅಂಬೇಡ್ಕರ್ ನಗರದ ನಿವಾಸಿಗಳು ದೂರಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಎಚ್ಚೆತ್ತು ಸೂಕ್ತ ಚರಂಡಿ ವ್ಯವಸ್ಥೆ ಮಾಡಿ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.


