ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಹೊರಟ್ಟಿ ಗ್ರಾಮದಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.
ಹೊರಟ್ಟಿ ಗ್ರಾಮದ ಜಿ.ಆರ್. ಪ್ರದೀಪ್ ಎಂಬುವವರ ಮನೆಯ ಸಮೀಪದ ತೋಟದಲ್ಲಿ ಈ ಅಪರೂಪದ ಕಪ್ಪು ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು
ತಕ್ಷಣವೇ ಮನೆಯ ಮಾಲೀಕರು ಖ್ಯಾತ ಉರಗ ರಕ್ಷಕ ಸ್ನೇಕ್ ಮೊಹಮದ್ ಅವರಿಗೆ ಮಾಹಿತಿ ನೀಡಿದರು. ಉರಗ ರಕ್ಷಕ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸುಮಾರು 15 ಅಡಿ ಉದ್ದದ ಬೃಹತ್ ಕಪ್ಪು ಕಾಳಿಂಗ ಸರ್ಪವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಸ್ನೇಕ್ ಮೊಹಮದ್ ಯಶಸ್ವಿಯಾದರು.
ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಬಳಿಕ ಅದನ್ನು ಅರಣ್ಯ ಇಲಾಖೆಯ ಮಾರ್ಗಸೂಚಿಯಂತೆ ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಈ ಕಾಳಿಂಗ ಸರ್ಪವು ಕಳೆದ ಕೆಲ ದಿನಗಳಿಂದ ಗ್ರಾಮದ ವಿವಿದೆಡೆ ಜನರ ಕಣ್ಣಿಗೆ ಬೀಳುತ್ತಿತ್ತು ಎನ್ನಲಾಗಿದೆ. ಈ ಮೂಲಕ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು. ರಕ್ಷಣಾ ಕಾರ್ಯಾಚರಣೆಯ ವೇಳೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಬೃಹತ್ ಕಾಳಿಂಗ ಸರ್ಪವನ್ನು ಭಯದಿಂದಲೇ ವೀಕ್ಷಿಸಿದರು.


