ಸರ್ಫಾಸಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್ ಗಳು ಭೂಮಾಫಿಯಾದವರೊಂದಿಗೆ ಶಾಮೀಲಾಗಿ ಕಾಫಿತೋಟಗಳನ್ನು ಹರಾಜು ಹಾಕುತ್ತಿರುವ ಪ್ರಕ್ರಿಯೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಫಾಸಿ ಕಾಯ್ದೆ ಬಳಸಿ ಕೊಡಗಿನ ಕಾಫಿ ತೋಟ ಹರಾಜು ಪ್ರಕರಣವೊಂದರಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿದ್ದ ಸಂದರ್ಭದಲ್ಲಿ ನ್ಯಾಯಾದೀಶರ ಕಾಳಜಿಯಿಂದ ಬ್ಯಾಂಕ್ ನವರ ಕಳ್ಳಾಟ ಬಯಲಾಗಿದೆ. ಸುಮಾರು 7 ರಿಂದ 8 ಕೋಟಿ ಬೆಲೆಬಾಳುವ 39 ಎಕರೆ ಕಾಫಿ ತೋಟವನ್ನು ಕೇವಲ 91 ಲಕ್ಷಕ್ಕೆ ಆನ್ ಲೈನ್ ಹರಾಜು ಮಾಡಿದ್ದ ಕೆನರಾ ಬ್ಯಾಂಕ್ ಕ್ರಮವನ್ನು ಪ್ರಶ್ನಿಸಿ ಬೆಳೆಗಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು, ವ್ಯಾಲ್ಯೂಯೇಟರ್ ಮತ್ತು ಆನ್ ಲೈನ್ ಹರಾಜಿನಲ್ಲಿ ಭೂಮಿ ಪಡೆದಿದ್ದವರ ಕುತಂತ್ರವನ್ನು ಎಳೆಎಳೆಯಾಗಿ ಬಯಲಿಗೆಳೆದು ಛೀಮಾರಿ ಹಾಕಿದ್ದಾರೆ. ತಪ್ಪು ಮಾಹಿತಿ ನೀಡಿರುವ ವ್ಯಾಲ್ಯೂಯೇಟರ್ ಈ ಹಿಂದೆ ಮಾಡಿದ್ದ ಎಲ್ಲಾ ಪ್ರಕರಣದ ಮಾಹಿತಿ ಸಲ್ಲಿಸುವಂತೆ ಆದೇಶ ಮಾಡಿದ್ದಾರೆ.
ಇದು ಒಂದು ಪ್ರಕರಣವಷ್ಟೇ ಇಂತಹ ನೂರಾರು ಪ್ರಕರಣಗಳಲ್ಲಿ ಕೆನರಾ ಬ್ಯಾಂಕ್ ರೈತರಿಗೆ ಅನ್ಯಾಯ ಮಾಡಿದೆ.
ಇದೇ ವಿಚಾರವಾಗಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ಮೂಡಿಗೆರೆ ಮತ್ತು ಮಂಗಳೂರು ಕೆನರಾ ಬ್ಯಾಂಕ್ ಕಛೇರಿ ಎದುರು ಪ್ರತಿಭಟನೆ ಮಾಡಿತ್ತು. ಆಗ ಬೆಳೆಗಾರರಿಗೆ ಸಫಾ೯ಸಿ ಕಾಯ್ದೆ ಬಗ್ಗೆ ಇನ್ನೂ ಮಾಹಿತಿಯ ಕೊರತೆ ಇತ್ತು. ಬೇರೆ ಎಲ್ಲ ಬ್ಯಾಂಕ್ ಗಳು ಬೆಳೆಗಾರರ ಸಾಲವಸೂಲಾತಿ ವಿಚಾರದಲ್ಲಿ ಮಾನವೀಯತೆ ತೋರಿದರೂ ಕೂಡ ಕೆನರಾ ಬ್ಯಾಂಕ್ ನ ಅಧಿಕಾರಿಗಳು ಮಾತ್ರ ಬೆಳೆಗಾರರ ಅಸಹಾಯಕ ಪರಿಸ್ಥಿತಿಯ ದುರ್ಲಾಭ ಪಡೆದು ಕೆಲವು ಸ್ಥಳೀಯ ವ್ಯಾಲುಯೇಟರ್ ಗಳ ಕುತಂತ್ರದಿಂದ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಶಾಮೀಲಾಗಿ ಕೆಲವು ತೋಟಗಳನ್ನು ಮೌಲ್ಯ ಕಡಿಮೆ ತೋರಿಸಿ ಹರಾಜು ಮಾಡಿ ಬೆಳೆಗಾರರನ್ನು ಸರ್ಫಸಿ ಹೆಸರಿನಲ್ಲಿ ವಂಚಿಸಿದ್ದಾರೆ. ಈಗ ಯುನಿಯನ್ ಬ್ಯಾಂಕ್ ಕೂಡ ಇದೇ ದಾರಿ ಹಿಡಿದಿದೆ.
ಈಗ ನ್ಯಾಯಾಲಯ ಬ್ಯಾಂಕ್ ಗಳಿಗೆ ಸರಿಯಾದ ಪ್ರಶ್ನೆ ಕೇಳಿದೆ. ನ್ಯಾಯಾಲಯ ಈ ಕುರಿತು ಕಠಿಣ ನಿಲುವು ತಾಳಿರುವುದು ಸ್ವಾಗತಾರ್ಹ. ಈವರೆಗೆ ಬ್ಯಾಂಕ್ ಹರಾಜು ಮಾಡಿರುವ ಹಾಗೂ ಈಗ ಹರಾಜು ಮಾಡಲು ಹೊರಟಿರುವ ಎಲ್ಲ ಕೇಸ್ ಗಳ ಮರುಪರಿಶೀಲನೆ ಆಗಬೇಕು. ಬಹುತೇಕ ಸಂದರ್ಭದಲ್ಲಿ ವ್ಯಾಲ್ಯುಯೇಟರ್ ಗಳು ಬ್ಯಾಂಕ್ ಸೂಚನೆ ಆಧಾರದಲ್ಲಿ ಭೂ ಮಾಫಿಯಾಗಳಿಗೆ ಅನುಕೂಲ ಆಗುವ ರೀತಿ ಮೌಲ್ಯ ನಿರ್ಧರಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸ್ಥಳೀಯ ವ್ಯಾಲುಯೇಟರ್ ಗಳು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಅಕ್ರಮ ಕಂಡು ಬಂದಲ್ಲಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


