ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಠಾಣೆಗಳಿಗೆ ಬಂದೂಕು ಜಮೆ ಮಾಡಬೇಕು ಎಂಬ ನಿಯಮದಿಂದ ಮಲೆನಾಡು ಭಾಗದ ರೈತರಿಗೆ ವಿನಾಯಿತಿ ನೀಡಬೇಕು ಎಂದು ಸಿ.ಪಿ.ಐ. ಮುಖಂಡ ಬಿ.ಕೆ. ಲಕ್ಷ್ಮಣಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಮಲೆನಾಡು ಭಾಗದ ರೈತರು ಬೆಳೆ ರಕ್ಷಣೆಗೆ ಮತ್ತು ಆತ್ಮ ರಕ್ಷಣೆಗೆಂದು ಪರವಾನಿಗಿ ಪಡೆದು ತಮ್ಮ ಮನೆಗಳಲ್ಲಿ ಬಂದೂಕು ಇಟ್ಟುಕೊಂಡಿರುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ತಿಂಗಳುಗಟ್ಟಲೇ ಬಂದೂಕನ್ನು ಪೊಲೀಸ್ ಠಾಣೆಯ ವಶಕ್ಕೆ ನೀಡುವದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತದೆ.
ಮಲೆನಾಡಿನಲ್ಲಿ ಬಹುತೇಕ ಒಂಟಿ ಮನೆಗಳು ಇರುತ್ತವೆ. ಮನೆಯಲ್ಲಿ ಕಾಫಿ, ಕಾಳುಮೆಣಸು, ಅಡಿಕೆ ಮುಂತಾದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿರುತ್ತಾರೆ. ಮನೆಯಲ್ಲಿ ಬಂದೂಕು ಇಲ್ಲದ ಸಂದರ್ಭವನ್ನು ದುರುಪಯೋಗಪಡಿಸಕೊಂಡು ಕಳ್ಳತನ, ದರೋಡೆ, ಕೊಲೆ, ಸುಲಿಗೆ ಮಾಡುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿಯೂ ಹೆಚ್ಚಿದೆ. ಹಾಗಾಗಿ ರೈತರು ತಮ್ಮ ಆತ್ಮರಕ್ಷಣೆ ಹಾಗೂ ಬೆಳೆರಕ್ಷಣೆಗೆ ಬಂದೂಕು ಹೊಂದಿರುವುದು ಅತ್ಯಗತ್ಯವಾಗಿದೆ.
ನೆರೆಯ ದಕ್ಷಿಣ ಕನ್ನಡ, ಶಿವಮೊಗ್ಗ, ಮಡಿಕೇರಿ ಜಿಲ್ಲೆಗಳಲ್ಲಿ ರೈತರು ಬಂದೂಕು ಜಮೆ ಮಾಡುವುದರಿಂದ ಆಯಾ ಜಿಲ್ಲಾಧಿಕಾರಿಗಳು ವಿನಾಯಿತಿ ನೀಡಿರುತ್ತಾರೆ. ಜೊತೆಗೆ ಕೇರಳ ರಾಜ್ಯದ ಹೈಕೋರ್ಟ್ ಸಹ ಚುನಾವಣೆ ಸಂದರ್ಭದಲ್ಲಿ ಬಂದೂಕು ಪೊಲೀಸ್ ಠಾಣೆಗೆ ಜಮೆ ಮಾಡಿಸಿಕೊಳ್ಳಬಾರದು ಎಂಬ ತೀರ್ಪು ನೀಡಿದೆ.
ಹಾಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಕ್ರಿಮಿನಲ್ ಹಿನ್ನಲೆ ಹೊಂದಿರುವವರನ್ನು ಹೊರತುಪಡಿಸಿ ಉಳಿದ ರೈತರಿಂದ ಚುನಾವಣೆ ಸಂದರ್ಭದಲ್ಲಿ ಬಂದೂಕು ವಶಪಡಿಸಿಕೊಳ್ಳುವ ನಿಯಮವನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದ್ದಾರೆ.




